ADVERTISEMENT

ಅಡಿಕೆ ನಿಷೇಧ ಪ್ರಸ್ತಾವಕ್ಕೆ ವಿರೋಧ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 9:57 IST
Last Updated 24 ಡಿಸೆಂಬರ್ 2013, 9:57 IST

ಹೊನ್ನಾವರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡಿಕೆ ನಿಷೇಧಿಸುವ ರೈತ ವಿರೋಧಿ ಕಠಿಣ ನಿಲುವು ತಳೆದಿವೆ’ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಹೊನ್ನಾವರ ಸಮಿತಿ ವತಿಯಿಂದ ಸೋಮವಾರ ಇಲ್ಲಿ ಪ್ರತಿಭಟನೆ ನಡೆಯಿತು.

ಟಪ್ಪರ್ ಸರ್ಕಲ್‌ನಿಂದ ಹೆದ್ದಾರಿಯ ಗುಂಟ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್‌ ಕಚೇರಿಯಲ್ಲಿ ಕೊನೆಗೊಂಡಿತು.  ಸಮಿತಿಯ ಅಧ್ಯಕ್ಷ ಎಂ.ಆರ್.ಹೆಗಡೆ ಮಾತನಾಡಿದರು. ನಂತರ ತಹಶೀಲ್ದಾರ್‌ ಎಚ್.ಕೆ.ನಾನಾವಟೆ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು.

‘ದೇವರ ಪೂಜೆ ಮತ್ತು ಜನರ ಮಧ್ಯದ ಒಪ್ಪಂದಗಳಿಗೆ ಅವಶ್ಯಕ ವಸ್ತುವಾಗಿರುವ ಅಡಿಕೆ ರಾಜ್ಯದ ರೈತರು, ವ್ಯಾಪಾಸ್ಥರು, ವಾಹನ ಮಾಲಕ–ಚಾಲಕರು ಸೇರಿದಂತೆ ರಾಜ್ಯದ 11 ಜಿಲ್ಲೆಗಳ 25 ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಒದಗಿಸಿದ್ದು ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರವಾಗಲೇ ಅಡಿಕೆ ನಿಷೇದದ ಪ್ರಸ್ತಾವ ಸಲ್ಲಿಸಲ್ಪಟ್ಟಿದೆ’ ಎಂದು ಅಡಿಕೆ ಬೆಳೆಯ ಮಹತ್ವ ಹಾಗೂ ರೈತರ ಸಂಕಷ್ಟವನ್ನು ಮನವಿಯಲ್ಲಿ ವಿವರಿಸಲಾಗಿದೆ.

ಅಡಿಕೆ ಬೆಳೆ ನಿಷೇಧಿಸದೆ ಅದರ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ಕೊಡಬೇಕು; ಗೋರಕ್‌ಸಿಂಗ್ ವರದಿ ಜಾರಿಗೊಳಿಸಿ ಅಡಿಕೆಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾಮಾಡಬೇಕು; ಅರಣ್ಯ ಸಾಗವಳಿ, ಹಾಡಿ, ಬೆಟ್ಟ ಭೂಮಿಯನ್ನು ಮಾಲ್ಕಿ ಮಾಡಬೇಕು; ಜಿಲ್ಲೆಯ ಸಮಗ್ರ ಭೂಮಿಯ ಸರ್ವೆಯನ್ನು ಹೊಸದಾಗಿ ಮಾಡಬೇಕು; ದೇಶಿತಳಿ ಹಸುಗಳಿಗೆ ಪಡಿತರ ಚೀಟಿಯ ಆಧಾರದ ಮೇಲೆ ಆಹಾರ ಒದಗಿಸಬೇಕು ಎಂಬಿತ್ಯಾದಿ 7 ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಲಾಗಿದ್ದು ಸರಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಲಾಗಿದೆ.

ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಭಾರತೀಯ ಕಿಸಾನ್ ಸಂಘದ ಮುಖಂಡರಾದ ಶ್ರೀಧರ ಹೆಬ್ಬಾರ, ಡಿ.ಎಂ.ನಾಯ್ಕ, ಸುಬ್ರಾಯ ಹೆಗಡೆ, ಸತ್ಯನಾರಾಯಣ ಹೆಗಡೆ, ಈಶ್ವರ ನಾಯ್ಕ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.