ADVERTISEMENT

ಅಪಾಯದಲ್ಲಿದ್ದ ದೋಣಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 10:58 IST
Last Updated 14 ಡಿಸೆಂಬರ್ 2012, 10:58 IST

ಕಾರವಾರ: ಆಳ ಸಮುದ್ರದಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ತಮಿಳುನಾಡು ಕನ್ಯಾಕುಮಾರಿ ಮೂಲದ ಟ್ರಾಲರ್ ದೋಣಿಯೊಂದನ್ನು ಇಲ್ಲಿಯ ಕಡಲ್ಗಾವಲು ಪಡೆ ರಕ್ಷಿಸಿ ಸುರಕ್ಷಿತವಾಗಿ ನಗರದ ಬೈತಖೋಲ ಬಂದರಿಗೆ ತಲುಪಿಸಿದ ಘಟನೆ ಗುರುವಾರ ನಡೆದಿದೆ.

ದೋಣಿಯಲ್ಲಿ 13 ಕಾರ್ಮಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಕನ್ಯಾಕುಮಾರಿಯ `ವಿಜೋವನ್' ಹೆಸರಿನ ದೋಣಿ ಇಲ್ಲಿಗೆ ಸಮೀಪದ ದೇವಗಡ ದ್ವೀಪದಿಂದ ಪಶ್ಚಿಮಕ್ಕೆ ಸುಮಾರು 28 ನಾಟಿಕಲ್ (ಅಂದಾಜು 55 ಕಿಲೋ ಮೀಟರ್) ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಣಿಯ ತಳಭಾಗದಲ್ಲಿ ರಂದ್ರಕಾಣಿಸಿಕೊಂಡು ಒಳಗೆ ನೀರು ಬರುತ್ತಿತ್ತು.

ಎಂಜಿನ್ ಒಳಗೆ ನೀರು ಹೋಗಿದ್ದರಿಂದ ಎಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಇದರಿಂದಾಗಿ ಮೀನುಗಾರರಿಗೆ ಅಪಾಯ ಎದುರಾಗಿತ್ತು. ಆಳ ಸಮುದ್ರದಲ್ಲಿ ಗಸ್ತು ನಡೆಸುತ್ತಿದ್ದ ಕಡಲ್ಗಾವಲು ಪಡೆಗೆ ಸೇರಿದ 'ಸಂಕಲ್ಪ' ಹಡುಗೆ ಅಲ್ಲಿಗೆ ಆಗಮಿಸಿ ದೋಣಿ ರಕ್ಷಣೆಗೆ ಮುಂದಾಯಿತು. ಅಪಾಯದಲ್ಲಿದ್ದ ಟ್ರಾಲರ್ ದೋಣಿಯನ್ನು ಎಳೆದತಂದು ಇಲ್ಲಿಯ ಬೈತಖೋಲ ಬಂದರಿಗೆ ತಲುಪಿಸಿತು. ದೋಣಿಯಲ್ಲಿ 600 ಕೆ.ಜಿ. ಮೀನುಗಳಿದ್ದು ದೋಣಿಯ ಮಾಲೀಕರಿಗೆ ವಿಷಯ ತಿಳಿಸಲಾಗಿದೆ ಎಂದು ಕಡಲ್ಗಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.