ADVERTISEMENT

ಆಮಿಷಕ್ಕೆ ಒಳಗಾಗದಿರಲು ಸಲಹೆ

ಅಂಗನವಾಡಿ ಕಾರ್ಯಕರ್ತೆಯರಿಗೆ ಮತದಾರರ ಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:37 IST
Last Updated 6 ಏಪ್ರಿಲ್ 2013, 6:37 IST
ಕಾರವಾರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯ ಕ್ರಮದಲ್ಲಿ ಜಿ.ಪಂ. ಸಿಇಓ ಕೆ.ಸುಬ್ರಾಯ ಕಾಮತ್ ಮಾತನಾಡಿದರು.
ಕಾರವಾರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯ ಕ್ರಮದಲ್ಲಿ ಜಿ.ಪಂ. ಸಿಇಓ ಕೆ.ಸುಬ್ರಾಯ ಕಾಮತ್ ಮಾತನಾಡಿದರು.   

ಕಾರವಾರ: ಪರಿಣಾಮಕಾರಿ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್ ಹೇಳಿದರು.

ಅಂಕೋಲಾ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂಕೋಲಾದಲ್ಲಿ ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲೆಯಾದ್ಯಂತ ಪ್ರತಿ ಮನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಈ ಸಂಪರ್ಕ ಜಾಲವನ್ನು ಬಳಸಿಕೊಂಡು ಮತದಾರರ ಜಾಗೃತಿ ಮೂಡಿಸಲಾಗುತ್ತಿದೆ. ಸ್ಥಳೀಯವಾಗಿ ಕಾರ್ಯಕ್ರಮವನ್ನು ರೂಪಿಸಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಅರ್ಹ ವ್ಯಕ್ತಿಗಳಿಗೆ ಮಾತ್ರ ಮತ ಚಲಾಯಿಸಬೇಕು ಎಂಬ ಸಂದೇಶವನ್ನು ಸಹ ಪ್ರತಿಯೊಬ್ಬರಿಗೆ ನೀಡಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಿತಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಕಾಮತ್ ನುಡಿದರು.

ಚುನಾವಣಾ ಆಯೋಗ ಈ ಬಾರಿ ಪ್ರತಿಯೊಬ್ಬ ಸರ್ಕಾರಿ ನೌಕರ ಮತದಾನ ಮಾಡಲು ಕಾರ್ಯಕ್ರಮ ರೂಪಿಸಿದೆ. ಅಂಚೆ ಮತದಾನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಎಲ್ಲಾ  ಇಲಾಖೆ ಸಿಬ್ಬಂದಿ ಮತ ಚಲಾಯಿಸಲು ಅವಕಾಶ ಒದಗಿಸಿದೆ. ಇದನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಹಶೀಲ್ದಾರ್ ಲಾಲಂಕಿ ಮಾತನಾಡಿ, ಈ ಬಾರಿ ಮತ ಚಲಾಯಿಸಲು 21 ಗುರುತಿನ ಚೀಟಿಗಳನ್ನು         ಚುನಾವಣಾ ಆಯೋಗ   ನಿಗದಿಪಡಿಸಿದೆ. ಮತದಾನಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬ ಮತದಾರರಿಗೆ ಭಾವಚಿತ್ರ ಇರುವ ಮತದಾರರ ಚೀಟಿಯನ್ನು ಅವರ ಮನೆಗಳಿಗೆ ಒದಗಿಸಲಾಗುವುದು.

ಮತಗಟ್ಟೆ ಅಧಿಕಾರಿಗಳು ಇಂತಹ ಮತದಾರರ ಚೀಟಿಯನ್ನು ಪ್ರತಿಯೊಬ್ಬರಿಗೆ ನೀಡಿ ಸ್ವೀಕೃತಿಯನ್ನು ಪಡೆದು ವಹಿ ಯಲ್ಲಿ ನಿರ್ವಹಿಸಬೇಕು ಎಂದು ತಿಳಿಸಿ ದರು.ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪಿ.ಜಿ.ಗಾಂವ್ಕರ್, ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT