ಕಾರವಾರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಯಾಣಿಸುತ್ತಿದ್ದ ಕಾರು, ಕುಮಟಾ ತಾಲ್ಲೂಕಿನ ಕತಗಾಲ ಬಳಿ ಅವರ ಬೆಂಗಾವಲು ವಾಹನಕ್ಕೆ ಸೋಮವಾರ ಡಿಕ್ಕಿಯಾಗಿದೆ.
ಕಾರಿನ ಮುಂಭಾಗ ಹಾಗೂ ಬೆಂಗಾವಲು ವಾಹನದ ಹಿಂಭಾಗ ಜಖಂಗೊಂಡಿದ್ದು, ಯಾರಿಗೂ ಗಾಯಗಳಾಗಿಲ್ಲ.
ಶಿರಸಿಯಿಂದ ಹೊನ್ನಾವರದತ್ತ ಹೋಗುತ್ತಿದ್ದಾಗ ಮುಂದೆ ಸಾಗುತ್ತಿದ್ದ ಸ್ಕಾರ್ಪಿಯೊ ವಾಹನದ ಚಾಲಕ ದಿಢೀರನೇ ಬಲಕ್ಕೆ ತಿರುವು ತೆಗೆದುಕೊಂಡರು. ಆಗ ಬೆಂಗಾವಲು ವಾಹನದ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಈ ವೇಳೆ, ಈ ವಾಹನದ ಹಿಂದಿದ್ದ ಸಚಿವರ ಕಾರಿನ ಚಾಲಕ ಕೂಡ ಬ್ರೇಕ್ ಹಾಕಿದರಾದರೂ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಯಿತು. ಪೊಲೀಸರು ಕೂಡಲೇ ಮತ್ತೊಂದು ವಾಹನದ ಮೂಲಕ ಸಚಿವರನ್ನು ಹೊನ್ನಾವರಕ್ಕೆ ಕಳುಹಿಸಿಕೊಟ್ಟರು.
ಅಪಘಾತವಾಗಿ ಅರ್ಧಗಂಟೆಯ ಬಳಿಕ ಸಚಿವರು, ‘ಕುಮಟಾ ಸಮೀಪ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದೆ. ಬದುಕಲು ಮತ್ತೊಂದು ಅವಕಾಶ..!!’ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.