ADVERTISEMENT

ಕೇಂದ್ರದಲ್ಲಿ ವೀರಭದ್ರ, ರಾಜ್ಯದಲ್ಲಿ ಕುಂಭಕರ್ಣ

ನವಶಕ್ತಿ ಸಮಾವೇಶದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:57 IST
Last Updated 10 ಮಾರ್ಚ್ 2018, 7:57 IST
ಯಲ್ಲಾಪುರ ಕ್ಷೇತ್ರ ಮಟ್ಟದ ನವಶಕ್ತಿ ಸಮಾವೇಶವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸಿದರು
ಯಲ್ಲಾಪುರ ಕ್ಷೇತ್ರ ಮಟ್ಟದ ನವಶಕ್ತಿ ಸಮಾವೇಶವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸಿದರು   

ಯಲ್ಲಾಪುರ: ‘ಕೇಂದ್ರ ಸರ್ಕಾರಕ್ಕೆ ಉತ್ತಮ ಹೆಸರು ಬರಬಹುದೆಂಬ ಆತಂಕದಿಂದ ಕೇಂದ್ರ ನೀಡಿದ ಅನುದಾನಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ಸಂಸದ ಪ್ರಹ್ಲಾದ ಜೋಷಿ ಆರೋಪಿಸಿದರು.

ಶುಕ್ರವಾರ ಇಲ್ಲಿ ನಡೆದ ಯಲ್ಲಾಪುರ ಕ್ಷೇತ್ರ ಮಟ್ಟದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕರ್ನಾಟಕದಲ್ಲಿ ಹಿಂದೂಗಳ ರಕ್ತದೋಕುಳಿಯನ್ನು ಸಿದ್ದರಾಮಯ್ಯ ಸರ್ಕಾರ ನೋಡುತ್ತಿದೆ. ಇಲ್ಲಿಯವರೆಗೆ ಕೇರಳ ಮೂಲಕ ಪಿಎಫ್ಐ ಸಂಘಟನೆಯವರಿಂದ 15 ಹಿಂದೂಗಳನ್ನು ಕೊಲೆ ಮಾಡಿಸ
ಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಸತ್ಯ ಮಾತನಾಡುವವರ ವಿರುದ್ಧ ದ್ವೇಷ ಸಾಧಿಸುವ ಸೇಡಿನ ರಾಜಕೀಯವನ್ನು ಸರ್ಕಾರ ಮಾಡುತ್ತಿದೆ ಎಂದ ಅವರು, ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಉತ್ಸುಕವಾಗಿದ್ದು, ರಾಜ್ಯದಲ್ಲಿ ಪರಿವರ್ತನೆ ತರುವ ಕಾರ್ಯಕ್ಕೆ ಕಾರ್ಯಕರ್ತರ ಪಡೆ ಸಜ್ಜಾಗಬೇಕು’ ಎಂದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ‘ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ವೀರಭದ್ರನಂತೆ ವೀರಾವೇಶದಿಂದ ಅಭಿವೃದ್ಧಿ ಪಥದಲ್ಲಿ ದೇಶವನ್ನು ಮುನ್ನಡೆಸುತ್ತಿದೆ. ಆದರೆ, ರಾಜ್ಯ ಸರ್ಕಾರ ಕುಂಭಕರ್ಣನಂತೆ ನಿದ್ರಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ಪ್ರಮುಖರಾದ ಸದಾನಂದ ಭಟ್ಟ, ರಾಘವೇಂದ್ರ ಭಟ್ಟ, ರೇಖಾ ಹೆಗಡೆ, ಶ್ರುತಿ ಹೆಗಡೆ, ರೂಪಾ ಬೂರ್ಮನೆ, ರಮೇಶ ನಾಯ್ಕ, ಕೃಷ್ಣ ಎಸಳೆ, ವಿ.ಎಸ್. ಪಾಟೀಲ, ಎಲ್.ಟಿ. ಪಾಟೀಲ, ಬಸವರಾಜ ಓಶಿಮಠ, ಉಮೇಶ ಭಾಗ್ವತ, ಗಣೇಶ ಸಣ್ಣಲಿಂಗಣ್ಣವರ್, ಗಣೇಶ ರಾವ್, ಸಿ.ಪಿ. ಪಾಟೀಲ ಉಪಸ್ಥಿತರಿದ್ದರು. ಯಲ್ಲಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ, ಮುಂಡಗೋಡ ತಾಲ್ಲೂಕು ಘಟಕದ ಆಧ್ಯಕ್ಷ ಗುಡ್ಡಪ್ಪ ಕಾತೂರ ನಿರೂಪಿಸಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 227 ಬೂತ್‌ಗಳು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು.
***
ಕಾರ್ಯಕರ್ತರ ವಿಶ್ವಾಸವೇ ಪಕ್ಷದ ಗೆಲುವಿಗೆ ಅಡಿಪಾಯ. ವಿರೋಧಿಗಳು ಮತ್ತೆ ಮೇಲೇಳದಂತೆ ಮಾಡುವ ಐತಿಹಾಸಿಕ ಗೆಲುವು ನಮ್ಮದಾಗಬೇಕು.
  – ಅನಂತಕುಮಾರ ಹೆಗಡೆ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.