ಕಾರವಾರ: ಇಲ್ಲಿನ ಮಾರುಕಟ್ಟೆಯಲ್ಲಿ ಟೊಮೆಟೊ ದರ ತೀವ್ರ ಏರಿಕೆ ಕಂಡಿದೆ. ಬೆಳೆಗಾರರ ಮೊಗದಲ್ಲಿ ಇದು ಮಂದಹಾಸ ಮೂಡಿಸಿದ್ದರೆ, ಬೆಲೆ ಹೆಚ್ಚಳದಿಂದ ಗ್ರಾಹಕರು ಮಾತ್ರ ಕಂಗಾಲಾಗಿದ್ದಾರೆ.
ಕಳೆದ ಭಾನುವಾರದ ಸಂತೆಯಲ್ಲಿ ಟೊಮೆಟೊ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾಗಿತ್ತು. ಆದರೆ ಈ ವಾರ ₹ 70ರ ಗಡಿ ತಲುಪಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ. ಇಲ್ಲಿನ ಸಂತೆಗೆ ಹಾವೇರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಿಂದ ಹಣ್ಣು, ಸೊಪ್ಪು ಹಾಗೂ ತರಕಾರಿಗಳು ಬರುತ್ತವೆ. ಆದರೆ ಈ ಬಾರಿ ಟೊಮೆಟೊ ಆವಕವೂ ಕಡಿಮೆಯಾಗಿದ್ದು, ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಹೋಟೆಲ್ಗಳ ಮಾಲೀಕರು ಆಹಾರ ಪದಾರ್ಥಗಳಿಗೆ ಟೊಮೆಟೊ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇನ್ನು ಮನೆಗಳಲ್ಲೂ ಟೊಮೆಟೊ ಬದಲಾಗಿ ಹುಣಸೆ ಹಣ್ಣು ಹೆಚ್ಚಾಗಿ ಬಳಕೆಯಾಗುತ್ತಿದೆ.
ಖರೀದಿಗೆ ಹಿಂದೇಟು!: ಬೆಲೆ ಏರಿಕೆಯಿಂದಾಗಿ ಟೊಮೆಟೊ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೆಟೊ ಅಗತ್ಯವಾಗಿರುವುದರಿಂದ ಜನರು ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ 2–3 ಕೆ.ಜಿ. ಖರೀದಿಸುತ್ತಿದ್ದ ಜನರು, ಇದೀಗ ಕಾಲು, ಅರ್ಧ ಕೆ.ಜಿ. ಖರೀದಿಗೆ ಸೀಮಿತವಾಗಿದ್ದಾರೆ.
ಇಳುವರಿ ಕಡಿಮೆ: ‘ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಹೀಗಾಗಿ ಟೊಮೆಟೊ ಇಳುವರಿ ಕುಸಿದಿದೆ. ಕೊಳವೆಬಾವಿ ನೀರಿನಲ್ಲಿ ಬೆಳೆದ ಟೊಮೆಟೊ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ನಾವೇ ಕೆ.ಜಿ. ₹ 60 ಕೊಟ್ಟು ಖರೀದಿಸಿದ್ದು, ಇಲ್ಲಿ ಕೆ.ಜಿ.ಗೆ ₹ 70ರಂತೆ ಮಾರಾಟ ಮಾಡುತ್ತಿದ್ದೇವೆ. ದೂರದ ಊರುಗಳಿಂದ ವ್ಯಾಪಾರ ಮಾಡಲು ಬಂದ ನಮಗೆ ಕನಿಷ್ಠ ₹ 10 ಲಾಭ ಬೇಡವೇ?’ ಎನ್ನುತ್ತಾರೆ ವ್ಯಾಪಾರಿ ಕುಷ್ಟಗಿಯ ವೆಂಕಟೇಶ.
ಸ್ವಲ್ಪ ಖರೀದಿ: ‘ಟೊಮೆಟೊ ಬೆಲೆಯನ್ನು ಕೇಳಿ ಬೆಚ್ಚಿಬೀಳುವಂತಾಗಿದೆ. ಕಳೆದ ವರ್ಷವೂ ಇದರ ದರ ₹ 100ರ ಆಸುಪಾಸಿನಲ್ಲಿತ್ತು. ಚೌಕಾಸಿ ಮಾಡಿದರೂ ವ್ಯಾಪಾರಸ್ಥರು ಕಡಿಮೆ ಮಾಡಲಿಲ್ಲ. ಸಾಂಬಾರು ಹಾಗೂ ಇನ್ನಿತರ ಆಹಾರ ಪದಾರ್ಥಗಳಿಗೆ ಹಿಂದಿನಿಂದಲೂ ಟೊಮೆಟೊ ಬಳಸುತ್ತಿದ್ದೇವೆ. ಹೀಗಾಗಿ ಅನಿವಾರ್ಯದಿಂದ ಸಂತೆಯಲ್ಲಿ ಒಂದು ಕೆ.ಜಿ. ಮಾತ್ರ ಖರೀದಿಸಿದೆ’ ಎನ್ನುತ್ತಾರೆ ಸಂಕ್ರಿವಾಡದ ನಿವಾಸಿ ಪದ್ಮಾ.
***
ತರಕಾರಿಗಳ ಬೆಲೆಯಲ್ಲಿ ತುಸು ಏರಿಕೆ
ಸಂತೆಯಲ್ಲಿ ತರಕಾರಿಗಳ ಬೆಲೆ ತುಸು ಏರಿಕೆಯಾಗಿದೆ. ಬೀನ್ಸ್ ಒಂದು ಕೆ.ಜಿ.ಗೆ ₹ 60, ಬದನೆಕಾಯಿ ₹ 60, ದೊಡ್ಡ ಮೆಣಸಿನಕಾಯಿ ₹ 80, ಬೆಂಡೆಕಾಯಿ ₹ 40 ಹೀಗೆ ಹಲವು ತರಕಾರಿಗಳ ದರ ಹೆಚ್ಚಳವಾಗಿದ್ದರೆ, ಸೊಪ್ಪುಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.