ADVERTISEMENT

ಗಾಂಧೀಜಿ ಅಹಿಂಸಾ ತತ್ವ ಸಾರ್ವಕಾಲಿಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:15 IST
Last Updated 8 ಅಕ್ಟೋಬರ್ 2011, 8:15 IST

ಅಂಕೋಲಾ: ಗಾಂಧೀಜಿ ಪ್ರತಿಪಾದಿಸಿದ  ಅಹಿಂಸೆ,  ಸತ್ಯಾಗ್ರಹದ ವಿಚಾರಗಳು ಸಾರ್ವಕಾಲಿಕ ಮಹತ್ವ ಹೊಂದಿವೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ನಿವಾರಣೆಗೆ ಶಾಂತಿಯುತ ಮಾರ್ಗಗಳಿಂದ ಪಡೆಯುವ ಯಶಸ್ಸು ಶಾಶ್ವತವಾಗಿ ರುತ್ತದೆ ಎಂಬುದನ್ನು ಗಾಂಧೀಜಿ ಯವರು ತಮ್ಮ ಹೋರಾಟದ ಮೂಲಕ ತಿಳಿಸಿದ್ದಾರೆ ಎಂದು ಕಾರವಾರ ದಿವೇಕರ್ ಕಾಲೇಜಿನ ಪ್ರಾಚಾರ್ಯ ಡಾ.ರಾಮಕೃಷ್ಣ ಗುಂದಿ ಅಭಿಪ್ರಾಯಪಟ್ಟರು.

ನಗರದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಸ್ವಾತಂತ್ರ್ಯ ಸಂಗ್ರಾಮ ಭವನ ಸಮಿತಿ, ಉಪ್ಪಿನ ಸತ್ಯಾಗ್ರಹ ಕರ ನಿರಾಕರಣೆ ಸಮಿತಿ, ಖಾದಿ ಗ್ರಾಮೋದ್ಯೋಗ ಸಮಿತಿ ಮತ್ತು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಗಾಂಧೀಜಿಯವರ 142ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ವಿ.ಜೆ. ನಾಯಕ ಗಾಂಧೀಜಿಯವರು ಸೂಚಿಸಿದ ಸಪ್ತ ಸಮಾಜ ಪಾತಕಗಳು ಮತ್ತು ಅಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹ ಮುಂತಾದ ಅನುಶಾಸನ ಗಳನ್ನು ಯುವಕರು ಅನುಸರಿಸುವ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಬೇಕು ಎಂದರು.

ಜಿ.ಸಿ. ಕಾಲೇಜು ಪ್ರಾಧ್ಯಾಪಕ ಸಿದ್ಧಲಿಂಗಸ್ವಾಮಿ ವಸ್ತ್ರದ `ಗಾಂಧೀಜಿಯ ತತ್ವ ಪ್ರನಾಳಿಕೆಯನ್ನು ವಿಮರ್ಶೆಯ ನಿಕಷಕ್ಕೆ ಒಡ್ಡಿದ ಡಾ.ಅಂಬೇಡ್ಕರ್, ಲೋಹಿಯಾ ಮೊದಲಾದವರು ಗಾಂಧಿವಾದದ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿದರು.

ಸಭಾ ಕಾರ್ಯಕ್ರಮದ ಮೊದಲು ಸ್ವಾತಂತ್ರ್ಯ ಭವನದ ಆವರಣದಲ್ಲಿನ ಗಾಂಧೀಜಿ ಪ್ರತಿಮೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲ್ ಶೆಟ್ಟಿ ಮಾಲಾರ್ಪಣೆ ಮಾಡಿದರು.  ಸ್ವಾತಂತ್ರ್ಯ ಹೋರಾಟಗಾರರ ಸಂಘದ ಬ್ರಹ್ಮಾನಂದ ನಾಯಕ ಸಹಕರಿಸಿದರು.  ಜಿ.ಪಂ. ಸದಸ್ಯ ವಿನೋದ ನಾಯಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ವಿ. ನಾಯ್ಕ ಉಪಸ್ಥಿತರಿದ್ದರು. 

ಅಮರ್ ಶೆಟ್ಟಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು.  ವಿದ್ಯಾರ್ಥಿನಿ ನಾಗರತ್ನ ಆಗೇರ ಗಾಂಧೀಜಿ ಕುರಿತು ಮಾತನಾಡಿದರು.  ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಎಂ. ನಾಯಕ ಸ್ವಾಗತಿಸಿದರು.  ಉಪನ್ಯಾಸಕರಾದ ಮಹೇಶ ಬಿ. ನಾಯಕ ನಿರೂಪಿಸಿದರು. ಎಸ್. ಆರ್. ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.