ADVERTISEMENT

ಗಿಡಗಳಿಗೆ ನಕಲಿ ರಾಸಾಯನಿಕ ಬಳಕೆ: ಬಂಧನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:40 IST
Last Updated 11 ಫೆಬ್ರುವರಿ 2012, 5:40 IST

ಕಾರವಾರ: ಹಣ್ಣಿನ ಗಿಡ, ಮರಗಳಿಗೆ ಫಲ ಬರುವ ರಾಸಾಯನಿಕವನ್ನು ಹಾಕು ತ್ತೇವೆ ಎಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದ ಆಂಧ್ರಪ್ರದೇಶದ ಇಬ್ಬರ ಯುವಕರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕಾಜುಬಾಗ್ ಆಕಾಶವಾಣಿ ಕೇಂದ್ರದ ಬಳಿ ಶುಕ್ರವಾರ ನಡೆದಿದೆ.

ಜನರನ್ನು ಮೋಸ ಮಾಡುತ್ತಿದ್ದ ಆಂಧ್ರಪ್ರದೇಶ ವಂಗೋಲಾ ಜಿಲ್ಲೆಯ ಪಿ.ರಾಜುಲು ಯಾದವ್ ಮತ್ತು ನಾಗಯ್ಯ ಎಂಬುವರು ನಗರಠಾಣೆ ಪೊಲೀಸರ ವಶದಲ್ಲಿದ್ದಾರೆ. ಇವರಿಬ್ಬರು ಹತ್ತು ದಿನಗಳ ಹಿಂದೆ ಇಲ್ಲಿಗೆ ಬಂದು ತಾಲ್ಲೂಕಿನ ವಿವಿಧೆಡೆ ಸಂಚರಿಸಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಮರಗಳಿ ರುವುದನ್ನು ಗಮನಿಸಿ ತೆಂಗಿನ ಮರಗಳಿಗೆ `ಸ್ಪೆಶಲ್ ಸಿಲಿಂಡರ್ ಮಿಕ್ಸ್‌ರ್~ ಮತ್ತು ಬೇರಿಗೆ ಇಂಜೆಕ್ಷನ್ ನೀಡಿದರೆ ಉತ್ತಮ ಫಲ ಬರುತ್ತದೆ ಎಂದು ಮನೆಮನೆಗೆ ತೆರಳಿ ಮಾಲೀಕರ ಮನವೊಲಿಸು ತ್ತಿದ್ದರು.

ಕಳೆದ ಭಾನುವಾರ ಇವರಿ ಬ್ಬರು ಇಲ್ಲಿಯ ಪದ್ಮನಾಭನಗರದ ಉದಯ ನಾಯ್ಕ ಅವರ ಮನೆಗೆ ಬಂದು ಮನೆಯ ಆವರಣದಲ್ಲಿರುವ ತೆಂಗಿನ ಮರಗಳನ್ನು ನೋಡಿ ಸರಿಯಾಗಿ ಫಲ ಬರದೇ ಇರುವುದನ್ನು ಗಮನಿಸಿ ತೆಂಗಿನ ಮರಕ್ಕೆ ರಾಸಾಯನಿಕ ಸಿಂಪಡಿ ಸುತ್ತೇವೆ ಇದರಿಂದ ಉತ್ತಮ ಫಲ ಬರುತ್ತದೆ ಎಂದು ಹೇಳಿದ್ದಾರೆ. ನಾಯ್ಕ ಅವರು ಆರಂಭ ದಲ್ಲಿ ಬೇಡವೆಂದರೂ ಏನೇನು ಹೇಳಿ ಕೊನೆಗೂ ಅವರ ಮನವೊಲಿಸಿದ್ದಾರೆ.

ಉದಯ ನಾಯ್ಕ ಒಪ್ಪಿದ ನಂತರ ಇವರು ತೆಂಗಿನ ಮರದ ಬುಡದಲ್ಲಿರುವ ಸ್ವಲ್ಪ ಮಣ್ಣನ್ನು ಅಗೆದು ಸಿಲಿಂಡರ್ ಮಿಕ್ಸರ್ ಸಿಂಪಡಿಸಿದ್ದಾರೆ. ಬೇರಿನ ಒಂದು ಭಾಗವನ್ನು ಮುರಿದು ಅದಕ್ಕೆ ಇಂಜೆಕ್ಷನ್ ನೀಡಿದ್ದಾರೆ. ಹೀಗೆ ಸುಮಾರು ಅರ್ಧದಿಂದ ಮುಕ್ಕಾಲು ಗಂಟೆಕಾಲ ಕೆಲಸ ಮಾಡಿ ಒಟ್ಟು ರೂ. 4 ಸಾವಿರ ಬಿಲ್ ಮಾಡಿದ್ದಾರೆ. ಆದರೆ ನಾಯ್ಕ ಅವರು ಕೇವಲ ಎರಡೂ ಸಾವಿರ ರೂಪಾಯಿ ನೀಡಿದ್ದಾರೆ.

ಶುಕ್ರವಾರ ಇವರಿಬ್ಬರು ಆಕಾಶ ವಾಣಿ ಪಕ್ಕದಲ್ಲಿರುವ ಮಹಮ್ಮದ್ ಶೇಖ್ ಅವರ ಮನೆಗೆ ಬಂದು ರಾಸಾ ಯನಿಕವನ್ನು ಸಿಂಪಡಿಸುತ್ತಿದ್ದರು. ಇವರನ್ನು ನೋಡಿ ಸಂಶಯಗೊಂಡ ಉದಯ ನಾಯ್ಕ ಅವರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ವಿಷಯ ತಿಳಿಸಿದ್ದಾರೆ.

ನಾಯಕ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  ಇಬ್ಬರೂ ಯುವಕ ರನ್ನು ವಶಕ್ಕೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.