ಕಾರವಾರ: ಕೇಂದ್ರ ಸರ್ಕಾರದ ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸುವಂತೆ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆ ತಿಳಿಸಿದರು.
ಮಂಗಳವಾರ ನಡೆದ ಸಂಸದರ ಸಮಿತಿ ಸಭೆಯಲ್ಲಿ ದೀನ್ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನದ ಬಗ್ಗೆ ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಸ್ತಾವ ತಯಾರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಸಮಿತಿ ಸಭೆಯಲ್ಲಿ ಸಲ್ಲಿಸಬೇಕು ಎಂದರು.
ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿಯಲ್ಲಿ ಅಂಕೋಲಾದಲ್ಲಿ 62 ಬಿಪಿಎಲ್ ಕುಟುಂಬದವರು ಇದ್ದು 25 ಕೆವಿಎ ಯ 4 ಟ್ರಾನ್ಸ್ಫಾರ್ಮರ್ ಅಳವಡಿಸುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದೇ ರೀತಿ ಕಾರವಾರದಲ್ಲಿ 77 ಬಿಪಿಎಲ್ ಕುಟುಂಬದವರಿಗೆ 5, ಕುಮಟಾದಲ್ಲಿ 77 ಬಿಪಿಎಲ್ ಕುಟುಂಬದವರಿಗೆ 2 ಹಾಗೂ ಜೊಯಿಡಾದಲ್ಲಿ ಗ್ರಾಮಾಂತರ ಕುಟುಂಬ ಸೇರಿ 551 ಬಿಪಿಎಲ್ ಕುಟುಂಬದವರಿಗೆ 35 ಟ್ರಾನ್ಸ್ಫಾರ್ಮರ್ ಸೇರಿದಂತೆ ಒಟ್ಟು 767 ಬಿಪಿಎಲ್ ಕುಟುಂಬದವರಿಗೆ 25 ಕೆವಿಎ ಯ 46 ಟ್ರಾನ್ಸ್ಫಾರ್ಮರ್ ಅಳವಡಿಸುವ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿದ್ಯುತ್ ಲೈನ್ಗಳು ಬಹಳ ಹಳೆಯದ್ದಾಗಿದ್ದು, ಇದನ್ನು ಬದಲಾಯಿಸಲು ₨ 95 ಕೋಟಿ ಮಂಜೂರಾಗಿದೆ. ಆದರೆ ಇದಕ್ಕಾಗಿ ₨ 200 ಕೋಟಿ ಅನುದಾನ ಬೇಕು ಎಂದು ಹೆಸ್ಕಾ ಅಧಿಕಾರಿ ಪ್ರಕಾಶ ನಾಯ್ಕ ತಿಳಿಸಿದರು.
ಮುಚ್ಚಳ್ಳಿ, ಸಣಕೆ, ಕಮರಗಾಂವ ದಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು₨ 3.5 ಕೋಟಿ ಅನುದಾನ ಬಿಡುಗಡೆ ಯಾಗಿದೆ ಎಂದು ಸಂಸದ ಹೆಗಡೆ ತಿಳಿಸಿದರು.
ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆ ಸಬ್ಸ್ಟೇಷನ್ಗಳನ್ನು ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿ ದೊರೆಯುತ್ತಿಲ್ಲ. ಕಾರವಾರದ ಸದಾಶಿವಗಡ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಸಬ್ಸ್ಟೇಷನ್ಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆಯಿದೆ. ಸಂಸದರ ಆದರ್ಶ ಗ್ರಾಮವಾದ ಸಿದ್ದಾಪುರದ ಕಾನಗೋಡದಲ್ಲಿ 25 ಎಚ್ಪಿಯ 5 ಟ್ರಾನ್ಸ್ಫಾರ್ಮರ್ ಹಾಕಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಹಣ ಬಿಡುಗಡೆಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಪ್ರಸಾತ್ ಮನೋಹರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.