ಕಾರವಾರ: ಮುಂಗಾರು ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಭಾನುವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಭರ್ಜರಿ ಮಳೆಯ ಅಭಿಷೇಕವಾಗಿದೆ.
ಶಿರಸಿ, ಸಿದ್ದಾಪುರ ಯಲ್ಲಾಪುರ, ಹಳಿಯಾಳ, ಜೋಯಿಡಾ ಹಾಗೂ ಮುಂಡಗೋಡದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.
ನಗರದಲ್ಲಿ ಬೆಳಿಗ್ಗೆ ಬಲವಾದ ಗಾಳಿ ಬೀಸಿದ್ದರಿಂದ ಬೈತಖೋಲದಲ್ಲಿರುವ ಮೀನೆಣ್ಣೆ ಘಟಕದ ಚಿಮಣಿ ಮುರಿದು ಹಾನಿ ಸಂಭವಿಸಿದೆ. ಘಟನೆ ನಡೆದ ವೇಳೆ ಕಾರ್ಮಿಕನೊಬ್ಬ ಬಾಯ್ಲರ್ ನಿರ್ವಹಣೆ ಕಾರ್ಯದಲ್ಲಿ ನಿರತನಾಗಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ ಕೆಲಹೊತ್ತು ಧಾರಾಕಾರ ಮಳೆ ಸುರಿದ್ದರಿಂದ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಸಂಚರಿಸಿದವು.
ಸಂತೆ ಮಳೆಗೆ ಆಹುತಿ: ಮಳೆಯಿಂದಾಗಿ ಭಾನುವಾರದ ಸಂತೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನ 3-4 ಗಂಟೆಗಳ ಕಾಲ ಮಳೆ ಬಿಡುವು ನೀಡಿತ್ತು. ಆದರೆ, ಗ್ರಾಹಕರಿರಲಿಲ್ಲ. ಆದರೆ, ಸಂಜೆ ಹೊತ್ತು ಸಂತೆಯಲ್ಲಿ ಜನಜಂಗುಳಿ ಕಂಡುಬಂತು. ಪುನಃ 6.30ರ ಸಮಾರಿಗೆ ಮತ್ತೆ ಮಳೆ ಪ್ರಾರಂಭವಾಗಿದ್ದರಿಂದ ಆಹಾರ ಪದಾರ್ಥಗಳು ನೀರಿನಲ್ಲಿ ನೆನೆದಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಯಿತು.
ಮುಕ್ತಿ ಕಾಣದ ಸಮಸ್ಯೆ: ಎರಡು ಬದಿಯ ಗಟಾರು ಕಳೆದ ಅನೇಕ ವರ್ಷಗಳಿಂದ ಮುಚ್ಚಿಹೋಗಿದ್ದರಿಂದ ನಗರದ ಸಾಯಿಕಟ್ಟಾ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ನಿಂತು ವಾಹನ, ಸವಾರರು ಪಾದಚಾರಿಗಳು ತೊಂದರೆ ಅನುಭವಿಸಿದರು.
ಮನೆ ಆವರಣ ಗೋಡೆ ಕುಸಿತ
ಭಟ್ಕಳ: ಶನಿವಾರ ರಾತ್ರಿ ಸುರಿದ ಮಳೆಗೆ ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲೆ ನಿಲ್ಲಿಸಿದ್ದ ಕಾರಿಗೂ ಹಾನಿಯಾದ ಘಟನೆ ತಾಲ್ಲೂಕಿನ ಜಾಲಿ ಗ್ರಾ.ಪಂ. ವ್ಯಾಪ್ಯಿಯ ಬೆಂಡೆಕಾನ್ನಲ್ಲಿ ನಡೆದಿದೆ.
ಬೆಂಡೆಕಾನ್ನ ಮಹ್ಮದ್ ರಫೀಖ್ ಪಠಾಣ್ ಎಂಬವರಿಗೆ ಸೇರಿದ ಕಾರಿಗೆ ಹಾನಿಯಾಗಿದೆ. ಶನಿವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಗಾಳಿ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಮನೆಯ ಆವರಣ ಗೋಡೆ ಕುಸಿದಿದ್ದಲ್ಲದೇ, ಗೋಡೆಯ ಕಲ್ಲುಗಳು ಕಾರಿನ ಮೇಲೆ ಬಿದ್ದು ಜಖಂಗೊಂಡು ಹಾನಿಯಾಗಿದೆ ಎನ್ನಲಾಗಿದೆ.
ಶನಿವಾರ ರಾತ್ರಿಯಿಡೀ ಬಿದ್ದ ಮಳೆಗೆ ತಾಲ್ಲೂಕಿನಲ್ಲಿ ಬತ್ತಿಹೋಗಿದ್ದ ಬಾವಿಗಳಿಗೆಲ್ಲಾ ನೀರು ಬಂದಿದ್ದು, ನೀರಿನ ಬವಣೆ ಸಂಪೂರ್ಣ ನಿವಾರಣೆಯಾದಂತಾಗಿದೆ. ಮಳೆಯ ಕೆಂಪು ನೀರು ನದಿ, ಹಳ್ಳಕೊಳ್ಳಗಳಲ್ಲಿ ತುಂಬಿ ಹರಿಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.