ADVERTISEMENT

ದೇಶಪಾಂಡೆಯಿಂದ ಸ್ವಹಿತಾಸಕ್ತಿ ರಾಜಕೀಯ: ನಾಯ್ಕ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 8:07 IST
Last Updated 22 ಮಾರ್ಚ್ 2014, 8:07 IST

ಭಟ್ಕಳ: ಮೂವತ್ತು ವರ್ಷಗಳಿಂದ ಸಚಿವರಾಗಿರುವ ಆರ್‌.ವಿ. ದೇಶಪಾಂಡೆ ಜಿಲ್ಲೆಯ ಅಭಿವೃದ್ದಿ ಬಗ್ಗೆ ಕಾರ್ಯ  ಮಾಡುವುದನ್ನು ಬಿಟ್ಟು, ಸಮಾಜ ಒಡೆದು ಆಳುವ ನೀತಿ ಅನುಸರಿಸಿ, ರಾಜಕೀಯ ಮಾಡುತ್ತಿ­ದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಜೆ.ಡಿ.ಎಸ್‌ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿ ಚುನಾವಣೆಯಲ್ಲೂ ಒಂದೊಂದು ಸಮಾಜವನ್ನು ಎತ್ತಿಕಟ್ಟಿ, ಅವರಿ­ಗಾಗದವರನ್ನು ಸೋಲಿಸುತ್ತ, ತಮಗೆ ಬೇಕಾದ ಸಮಾಜವನ್ನು ತಮ್ಮಿಷ್ಟದಂತೆ ಉಪಯೋಗಿಸಿ­ಕೊಂಡಿದ್ದಾರೆ. ಸಮಾಜವನ್ನು ನಿರ್ಲಕ್ಷಿಸಿ, ಸ್ವಹಿತಾ­ಸಕ್ತಿಯ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಮಗನಿಗೆ ಕಾಂಗ್ರೆಸ್‌ನಿಂದ  ಟಿಕೆಟ್ ತಂದಿರುವುದೇ ಇದಕ್ಕೆ ತಾಜಾ ಉದಾಹರಣೆ ಎಂದು ನಾಯ್ಕರು ಆರೋಪಿಸಿದರು.

ಜೆ.ಡಿ.ಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಇನಾಯತ್‌ ಉಲ್ಲಾ ಶಾಬಂದ್ರಿ, ಕ್ಷೇತ್ರ ಘಟಕದ ಅಧ್ಯಕ್ಷ ಸಂತೋಷ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಮಂಜಮ್ಮ ಕೆ, ತಾ.ಪಂ ಉಪಾಧ್ಯಕ್ಷ ಮಧುಕರ ಸುಬ್ಬುಮನೆ, ಸದಸ್ಯೆ ಜಯಾ ನಾಯ್ಕ, ಪ್ರಮುಖರಾದ ವಿಠ್ಠಲ ದೈಮನೆ, ಎಂ.ಡಿ. ನಾಯ್ಕ, ವೆಂಕಟೇಶ ನಾಯ್ಕ, ಮಂಜುಗೊಂಡ, ಕೃಷ್ಣ ಹಳ್ಳೇರ್‌, ಪಾಂಡುರಂಗ ನಾಯ್ಕ, ಮಂಜು ನಾಯ್ಕ, ಫಾರುಖಿ ಭಾಗವಹಿಸಿದ್ದರು.

‘ಅಪ್ಪ ಮಕ್ಕಳ ರಾಜಕೀಯ’
ಯಲ್ಲಾಪುರ:
ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರು ತಮ್ಮ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡಿಸುವ ಮೂಲಕ ಜಿಲ್ಲೆಯಲ್ಲಿಯೂ ಅಪ್ಪ- ಮಕ್ಕಳ ಆಳ್ವಿಕೆಗೆ ನಾಂದಿ ಹಾಡಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್. ನಾಯ್ಕ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಮಗನಿಗೆ ಮತ ಪಡೆಯುವ ತಂತ್ರವಾಗಿ ತರಾತುರಿಯಲ್ಲಿ ಕೆಲವೇ ಅತಿಕ್ರಮಣದಾರರಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಜನರ ಬಗ್ಗೆ ನಿಜವಾದ ಕಳಕಳಿ ಇಲ್ಲ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿಲ್ಲ. ಕೇಂದ್ರದಿಂದ ಜಿಲ್ಲೆಗೆ ಯಾವ ಮಹತ್ವದ ಯೋಜನೆಯನ್ನೂ ತರಲಿಲ್ಲ. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವೂ ಆಗಿಲ್ಲ. ಸೀಬರ್ಡ್‌ ನಿರಾಶ್ರಿತರಿಗೆ ಪರಿಹಾರ ಒದಗಿಸಲೂ ಸಾಧ್ಯವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಜಿಲ್ಲೆಯ ಜನ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಅಬ್ದುಲ್ ಹಕ್ ಶೇಖ್, ಡಾ. ರವಿ ಭಟ್ಟ, ಪಿ.ಜಿ. ಭಟ್ಟ ಬರಗದ್ದೆ, ರವಿಚಂದ್ರ ನಾಯ್ಕ, ಫಿರ್ ಸಾಬ್, ರಾಘು ದೇವಾಡಿಗ, ಆರತಿ ನಾಯ್ಕ, ಶಕೀಲ್ ಅಹ್ಮದ್, ಅರವಿಂದ ವೆಕರ್, ವಿಶ್ವೇಶ್ವರ ಜೋಶಿ, ವಿ.ಎಂ. ಹೆಗಡೆ, ರಾಜೇಶ ದೇಶಭಾಗ ಮತ್ತಿತರರು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.