ADVERTISEMENT

ನನಸಾಗುವತ್ತ ಹೊಸ ಸೇತುವೆ ಕನಸು

ನಾಗೇಂದ್ರ ಖಾರ್ವಿ
Published 2 ಜನವರಿ 2012, 9:05 IST
Last Updated 2 ಜನವರಿ 2012, 9:05 IST

ಕಾರವಾರ: ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸುಂಕೇರಿ ಸೇತುವೆ ನಿರ್ಮಿಸಿ ಐದು ದಶಕ ಕಳೆದಿದ್ದು, ಸೇತುವೆ ಶಿಥಿಲಾವಸ್ಥೆ ತಲುಪಿದೆ. ಉಪ್ಪು ನೀರಿನ ವಾತಾವರಣದಿಂದಾಗಿ ಸೇತುವೆಗೆ ಬಳಸಿರುವ ರಾಡ್‌ಗಳಿಗೆ ತುಕ್ಕು ಹಿಡಿದಿವೆ. ಸೇತುವೆ ತಳಭಾಗವನ್ನು ನೋಡಿದರೆ ಇಂದೋ ನಾಳೆಯೋ ಬಿದ್ದು ಹೋಗುವ ಹಂತ ದಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ನಗರಸಭೆ ವ್ಯಾಪ್ತಿಗೆ ಬರುವ ಸುಂಕೇರಿ ಮತ್ತು ಕಡವಾಡ ಗ್ರಾಮವನ್ನು ಕಾಳಿ ನದಿ ಹಿನ್ನೀರು ಬೇರ್ಪ ಡಿಸಿದೆ. ಇದರಿಂದಾಗಿ ಕಡವಾಡ ಗ್ರಾಮಸ್ಥರು ನಗರಕ್ಕೆ ಬರಬೇಕಾದರೆ ಸುತ್ತುಹಾಯಿಸಿ ಬರಬೇಕಿತ್ತು. ಇದೂ ಅಲ್ಲದೆ ಕಾಳಿ ಹಿನ್ನೀರು ಕೃಷಿ ಜಮೀನಿಗೂ ನುಗ್ಗುತ್ತಿತ್ತು. ಈ ಕಾರಣದಿಂದಾಗಿ ಸಣ್ಣ ನೀರಾವರಿ ಹಳಿಯಾಳ ವಿಭಾಗ 1962ರಲ್ಲಿ ಸುಂಕೇರಿ-ಕಡವಾಡ ಮಧ್ಯೆ ಅಂದಾಜು 120 ಮೀಟರ್ ಉದ್ದದ ಸೇತುವೆ ನಿರ್ಮಿಸಿತು.

ಸೇತುವೆ ನಿರ್ಮಾಣದಿಂದಾಗಿ ಕಡ ವಾಡ, ಕಿನ್ನಡ, ಸಿದ್ದರ ಗ್ರಾಮದವರು ಈ ಸೇತುವೆಯನ್ನು ಬಳಸಿ ಕಾರವಾರ ನಗರಕ್ಕೆ ಹೋಗುತ್ತಿದ್ದರು. ಇದರಿಂದ ಸಮಯ ಉಳಿತಾಯವಷ್ಟೇ ಅಲ್ಲ. ಇಂಧನ ಮಿತವ್ಯಯವೂ ಸಾಧ್ಯ ವಾಗಿತ್ತು. ಆದರೆ, ಕಳೆದೊಂದು ದಶಕ ದಿಂದ ಈ ಸೇತುವೆ ಸಾರ್ವಜನಿಕರ ಉಪಯೋಗದಿಂದ ದೂರವಾಗಿದೆ. ಸೇತುವೆ ಶಿಥಿಲಗೊಂಡಿರುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.

ಸೇತುವೆಯ ಸಿಮೆಂಟ್ ಕಾಂಕ್ರೀಟ್ ಕಿತ್ತು ಹೋಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸೇತುವೆಯ ಎರಡೂ ಬದಿ ಯಲ್ಲಿರುವ ಗೋಡೆಗಳ ಮೇಲೆ ಸ್ವಲ್ಪ ಭಾರ ಹಾಕಿದರೂ ಅವು ಬಿದ್ದು ಹೋಗುವ ಸಾಧ್ಯತೆಗಳೇ ಹೆಚ್ಚು. ಸೇತು ವೆಯ ತಳಭಾಗ ನೊಡಿದರೆ ಮೈ ಜುಮ್ಮೆನ್ನುತ್ತದೆ.

ರಾಡ್‌ನಿಂದ ಸಿಮೆಂಟ್ ಬೇರ್ಪಟ್ಟಿದ್ದು ಹೆಚ್ಚಿನ ಭಾರ ಬಿದ್ದರೆ ಸೇತುವೆ ಕುಸಿಯುವುದು ಪಕ್ಕಾ. ಸೇತುವೆ ಮೇಲೆ ಅಲ್ಲಲ್ಲಿ ರಂಧ್ರಗಳು ಬಿದ್ದಿದ್ದು ಅಪಾಯದ ಮುನ್ಸೂಚನೆಯಾಗಿದೆ. ಸೇತುವೆ ಶಿಥಿಲಾವಸ್ಥೆ ತಲುಪಿದ್ದರಿಂದ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ ವ್ಯಾಪಾರ ವಹಿವಾಟಿಗೆ ಪಟ್ಟಣಕ್ಕೆ ಹೋಗುವವರು ತೊಂದರೆ ಅನುಭವಿಸುತ್ತಿದ್ದಾರೆ. ಏಳೆಂಟು ಕಿಲೋ ಮೀಟರ್ ಸುತ್ತುಹಾಯಿಸಿ, ದುಪ್ಪಟ್ಟು ಹಣಕೊಟ್ಟು ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಕ್ಕೆ ಬರ ಬೇಕಾಗಿದೆ.

`ಸೇತುವೆ ದುರಸ್ತಿಗಾಗಿ ಅನೇಕ ಬಾರಿ ಜಿಲ್ಲಾಡಳಿತ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಮನವಿಗೆ ಸರ್ಕಾರ ಸ್ಪಂದಿಸಿ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಕೂಡಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸ ಬೇಕು~ ಎನ್ನುತ್ತಾರೆ ಸ್ಥಳೀಯ ನಿವಾಸಿ ಸತೀಶ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.