ADVERTISEMENT

ನೋಟು ಹಂಚುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 8:27 IST
Last Updated 24 ಏಪ್ರಿಲ್ 2013, 8:27 IST

ಶಿರಸಿ: ತಾಲ್ಲೂಕಿನ ಬನವಾಸಿ ಸಮೀಪ ದಾಸನಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ವೋಟು ಕೇಳಿ ನೋಟು ಹಂಚುತ್ತಿದ್ದ ವೇಳೆ ಪೊಲೀಸರು ಹಾಗೂ ಫ್ಲಾಯಿಂಗ್ ತನಿಖಾ ತಂಡದವರು ದಾಳಿ ನಡೆಸಿ, ಕಾರು, 2.62ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡು ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ರಾಜಾರಾಮ, ನಾಗರಾಜ, ಮಧು, ರವಿ ಬಂಧಿತರು. ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿ ಎಂದು ಈ ನಾಲ್ವರು ಜನರಿಗೆ ಹಣ ಹಂಚುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿ ಅವರ ಬಳಿ ಇದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪಾಧೀಕ್ಷಕರು ಸವಿ ಶಂಕರ ನಾಯ್ಕ ತಿಳಿಸಿದ್ದಾರೆ. 

ಯಲ್ಲಾಪುರ ವರದಿ
ಗೂಡ್ಸ್ ರಿಕ್ಷಾವೊಂದರಲ್ಲಿ ಸಾಗಿಸಲಾಗುತ್ತಿದ್ದ ಕಾಂಗ್ರೆಸ್ ಪಕ್ಷದ ಚಿಹ್ನೆಯುಳ್ಳ ಟೋಪಿ ಮತ್ತು ಶಾಲುಗಳನ್ನು ಚುನಾವಣಾ ಜಾಗೃತದಳದವರು ಡೌಗಿನಾಲಾ ಚೆಕ್ ಪೋಸ್ಟ್ ಬಳಿ ಮಂಗಳವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.

  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಯಲ್ಲಾಪುರಕ್ಕೆ ಗೂಡ್ಸ್ ರಿಕ್ಷಾದಲ್ಲಿ 3 ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸಾವಿರಾರು ಟೋಪಿ ಮತ್ತು ಶಾಲುಗಳನ್ನು ಸಾಗಿಸಲಾಗುತ್ತಿತ್ತು. ರಿಕ್ಷಾ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಚುನಾವಣಾ ಜಾಗೃತ ದಳ ಸಿಬ್ಬಂದಿ ವಿಚಾರಣೆ ನಡೆಸಿದಾಗ ಸೂಕ್ತ ದಾಖಲೆಗಳು ಲಭ್ಯವಾಗದ ಕಾರಣ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಸಿಪಿಐ ಪಿ.ವಿ.ಸಾಲಿಮಠ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.