ADVERTISEMENT

ಪಕ್ಷೇತರರಿಗಿಂತ ‘ನೋಟಾ’ ಮತ ಹೆಚ್ಚು!

ಆರು ಕ್ಷೇತ್ರಗಳಲ್ಲಿ 11 ಸಾವಿರಕ್ಕೂ ಅಧಿಕ ಚಲಾವಣೆ; ಹಲವರಿಗೆ ಠೇವಣಿ ನಷ್ಟ

ಸದಾಶಿವ ಎಂ.ಎಸ್‌.
Published 17 ಮೇ 2018, 9:57 IST
Last Updated 17 ಮೇ 2018, 9:57 IST
ಪಕ್ಷೇತರರಿಗಿಂತ ‘ನೋಟಾ’ ಮತ ಹೆಚ್ಚು!
ಪಕ್ಷೇತರರಿಗಿಂತ ‘ನೋಟಾ’ ಮತ ಹೆಚ್ಚು!   

ಕಾರವಾರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ‘ನೋಟಾ’ ಚಲಾವಣೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ 11 ಸಾವಿರಕ್ಕೂ ಅಧಿಕ ಮತದಾರರು ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳು ಅರ್ಹರಲ್ಲ ಎಂದು ಮತ ಚಲಾಯಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಈ ಪ್ರಮಾಣ ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಗಳಿಂತಲೂ ಅಧಿಕವಾಗಿದೆ.

‘ರಾಜಕೀಯ ಪಕ್ಷಗಳು ಆಯ್ಕೆ ಮಾಡಿ ಕಣಕ್ಕಿಳಿಸಿದ ಅಭ್ಯರ್ಥಿಗಳಲ್ಲಿ ಜನಪ್ರತಿನಿಧಿಯಾಗಲು ಯಾರೂ ಸೂಕ್ತರಲ್ಲ ಎಂಬ ಸಂದೇಶ ಮಾತ್ರ ನೋಟಾ ಚಲಾವಣೆಯಿಂದ ಸಿಗುತ್ತದೆ. ಆದರೆ, ಈ ಮತಗಳೆಲ್ಲವೂ ವ್ಯರ್ಥವಾಗುತ್ತವೆ.

ಆದ್ದರಿಂದ ಈ ಅವಕಾಶ ಸೂಕ್ತವಲ್ಲ. ನೋಟಾದಲ್ಲಿ ಹೆಚ್ಚು ಮತಗಳು ದಾಖಲಾದರೂ ಆ ಕ್ಷೇತ್ರದಲ್ಲಿ ಜಾಸ್ತಿ ಮತಗಳನ್ನು ಪಡೆದ ವರೇ ಆಯ್ಕೆಯಾಗುತ್ತಾರೆ. ಇದರಿಂದ ಏನು ಪ್ರಯೋಜನವಾದಂ ತಾಯಿತು ಎಂಬ ಪ್ರಶ್ನೆ ಮೂಡುತ್ತದೆ’ ’ ಎನ್ನುವುದು ಬಿಜೆಪಿಯ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ ಅವರ ಅಭಿಪ್ರಾಯ.

ADVERTISEMENT

ಚುನಾವಣೆಗೂ ಪೂರ್ವದಲ್ಲಿ ‘ನೋಟಾ’ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ‌, ಅರಿವು ರವಾನೆಯಾಗಿದೆ. ಹೀಗಾಗಿಯೇ ಇಷ್ಟೊಂದು ಪ್ರಮಾಣದಲ್ಲಿ ಮತದಾರರು ತಮ್ಮ ಆಯ್ಕೆಯನ್ನು ಮತಯಂತ್ರಗಳಲ್ಲಿ ತಿಳಿಸಿದ್ದಾರೆ ಎನ್ನುತ್ತಾರೆ ಅವರು.

ಕರಾವಳಿಯಲ್ಲಿ 14 ಮಂದಿಗೆ ಠೇವಣಿ ನಷ್ಟ: ಜಿಲ್ಲೆಯ ಕರಾವಳಿ ಭಾಗದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ 14 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅವರಲ್ಲಿ ಪಕ್ಷೇತರರೇ ಅಧಿಕವಾಗಿದ್ದಾರೆ. ಕಾರವಾರ, ಕುಮಟಾ ಮತ್ತು ಭಟ್ಕಳ ಕ್ಷೇತ್ರಗಳಲ್ಲಿ ವಿಜೇತರಾದ
ಬಿಜೆಪಿ ಅಭ್ಯರ್ಥಿಗಳು, ಪರಾಭವಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಉಳಿಸಿಕೊಂಡಿದ್ದಾರೆ.

ಠೇವಣಿ ಏನಾಗಲಿದೆ?: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ತಲಾ ₹10 ಸಾವಿರವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇಡಬೇಕು. ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳಲ್ಲಿ ₹5 ಸಾವಿರ ನಿಗದಿ ಮಾಡಲಾಗಿದೆ. ಚುನಾ ವಣೆಯಲ್ಲಿ ಪರಾಜಯಗೊಂಡ ಅಭ್ಯರ್ಥಿಯು ವಿಜೇತರು ಪಡೆದ ಮತಗಳಲ್ಲಿ ಆರಕ್ಕೆ ಒಂದು ಭಾಗ ದಷ್ಟು ಮತಗಳನ್ನು ಪಡೆದಿದ್ದರೆ ಠೇವಣಿ ಲಭಿಸುತ್ತದೆ. ಒಂದುವೇಳೆ, ಅಷ್ಟು ಪಡೆದುಕೊಳ್ಳದಿದ್ದರೆ ಠೇವಣಿ ಚುನಾವಣಾ ಆಯೋ ಗದ ಪಾಲಾಗುತ್ತದೆ. ಠೇವಣಿ ಪಡೆದುಕೊಳ್ಳುವ ಮತ್ತು ವಾಪಸ್ ಮಾಡುವ ಜವಾಬ್ದಾರಿ ಚುನಾವ ಣಾಧಿಕಾರಿಗೇ ವಹಿಸಲಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.