ADVERTISEMENT

ಭಟ್ಕಳ: ಸಂಭ್ರಮದ ಈದ್ ಉಲ್ ಫಿತ್ರ್

ಮಳೆಯಿಂದಾಗಿ ಮಸೀದಿಗಳಲ್ಲೇ ಪ್ರಾರ್ಥನೆ; ಪರಸ್ಪರ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:27 IST
Last Updated 16 ಜೂನ್ 2018, 9:27 IST

ಭಟ್ಕಳ: 29 ದಿನಗಳಿಂದ ಕಟ್ಟುನಿಟ್ಟಿನ ಉಪವಾಸ ವ್ರತಾಚರಣೆ ನಡೆಸಿದ ಭಟ್ಕಳದ ಮುಸ್ಲಿಮರು ಶುಕ್ರವಾರ ಸಂಭ್ರಮ ಸಡಗರಗಳಿಂದ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸಿದರು.

ಮುಸ್ಲಿಮರ ಧರ್ಮಗುರುಗಳಾದ ಖಾಝಿ ಮೌಲಾನಾ ಇಕ್ಬಾಲ್ ಮುಲ್ಲಾ ನದ್ವಿ ಹಾಗೂ ಮೌಲಾನಾ ಖಾಜಾ ಅಕ್ರಮಿ ಮದನಿ ಅವರು ಉಪವಾಸ ವ್ರತ ಅಂತ್ಯಗೊಳಿಸುವಂತೆ ಗುರುವಾರ ರಾತ್ರಿ ಸೂಚನೆ ನೀಡಿದರು. ಹೀಗಾಗಿ ಶುಕ್ರವಾರ ಹಬ್ಬ ಆಚರಿಸಲಾಯಿತು. ಶುಭ್ರ ಶ್ವೇತ ವಸ್ತ್ರಧಾರಿಗಳಾದ ಮುಸ್ಲಿಮರು ಅತ್ತರ್ ಪೂಸಿಕೊಂಡು ಪಟ್ಟಣದಲ್ಲಿ ಧರ್ಮಗುರುಗಳೊಂದಿಗೆ ಈದ್ ಮೆರವಣಿಗೆ ನಡೆಸಿದರು.

ಭಟ್ಕಳದ ಜಾಮಿಯಾ ಮಸೀದಿ (ಚಿನ್ನದಪಳ್ಳಿ), ಖಲೀಫಾ ಜಾಮಿಯಾ ಮಸೀದಿ, ನವಾಯತ್ ಕಾಲೊನಿಯ ತಂಝೀಮ್ ಜುಮ್ಮಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಯಿತು. ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಮೌಲಾನಾ ಖಾಝಾ ಅಕ್ರಮಿ ಮದನಿ, ಮೌಲಾನಾ ಅನ್ಸಾರ್ ಖತೀಬ್ ಮದನಿ ನಮಾಜ್ ಬೋಧಿಸಿದರು. ಉಪವಾಸ ವ್ರತಾಚರಣೆ ಹಾಗೂ ಈದ್ ಮಹತ್ವದ ಬಗ್ಗೆ ವಿವರಿಸಿದರು. ನಂತರ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಅಂಗಡಿಗಳನ್ನು ಮುಚ್ಚಿ ಈದ್ ಹಬ್ಬ ಆಚರಿಸಿದ ಮುಸ್ಲಿಮರು, ಹಿಂದೂಗಳು ಸೇರಿದಂತೆ ಎಲ್ಲಾ ಸಮಾಜದವರೊಂದಿಗೆ ಶುಭಾಶಯ ವಿನಿ
ಮಯ ಮಾಡಿದರು. ಬಳಿಕ ಸಿಹಿ ಹಂಚಿದರು. ತಂಝೀಮ್‌ನಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸ
ಲಾಯಿತು. ಮಧ್ಯಾಹ್ನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಬಂಧುಗಳು ಸ್ನೇಹಿತರೊಂದಿಗೆ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.