ಸಿದ್ದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಧರೆಯ ಅಂಚಿನಲ್ಲಿ ಅಥವಾ ಮರಗಳ ಅಡಿಯಲ್ಲಿ ಮನೆ ಕಟ್ಟಿಕೊಂಡವರ ಸಂಕಟ ಮಳೆಗಾಲ ಬಂದಾಗ ತಾರಕಕ್ಕೇರುವುದು ಮಾಮೂಲು. ಆದರೆ ಮಳೆಯಿಂದ ಹಾನಿಯಾದಾಗ ಸರ್ಕಾರ ನೀಡುವ ಪರಿಹಾರ ಮಾತ್ರ ಬಹುತೇಕ ಸಂದರ್ಭಗಳ್ಲ್ಲಲಿ `ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಯಂತಾಗಿರುವುದು ವಿಪರ್ಯಾಸ.
ಪ್ರಾಕೃತಿಕವಾಗಿಯೇ ಗುಡ್ಡ-ಬೆಟ್ಟಗಳಿಂದ ತುಂಬಿರುವ ಈ ತಾಲ್ಲೂಕಿನಲ್ಲಿ ಗುಡ್ಡದ ಅಂಚಿನಲ್ಲಿ ಮನೆ ಕಟ್ಟಿಕೊಳ್ಳುವ ಅನಿವಾರ್ಯ ಸ್ಥಿತಿ ಬಹುತೇಕ ಜನರದ್ದು. ಅದರೊಂದಿಗೆ ಚಿಕ್ಕ ಸ್ಥಳದಲ್ಲಿಯೇ ತೆಂಗು, ಹಲಸು ಮತ್ತಿತರ ಮರಗಳನ್ನು ಬೆಳೆಸಿಕೊಳ್ಳುವವರೂ ಸಾಕಷ್ಟು ಜನ. ಈ ರೀತಿ ಧರೆಯ ಪಕ್ಕದ ಮನೆಗಳ ಜನರಿಗೆ ಧರೆ ಕುಸಿಯುವ ಭೀತಿಯಾದರೆ, ಮರದ ಅಡಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಮರ ಮುರಿದು ಬೀಳುವ ಭಯ. ಈ ಕಾರಣಕ್ಕಾಗಿಯೇ ಮಳೆಗಾಲ ಇವರ ಪಾಲಿಗೆ ಕಷ್ಟದ ಸಮಯ.
ಮಳೆಗಾಲದಲ್ಲಿ ಧರೆ ಕುಸಿದ ಅಥವಾ ಮರ ಬಿದ್ದ ಮಾಹಿತಿ ಪಟ್ಟಣದ ತಹಶೀಲ್ದಾರ್ ಕಚೇರಿಗೆ ತಾಲ್ಲೂಕಿನ ಮೂಲೆಮೂಲೆಗಳಿಂದ ಬರುತ್ತಲೇ ಇರುತ್ತದೆ. ಆ ನಂತರ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸ್ಥಳಕ್ಕೆ ನೀಡಿ, ಪಂಚನಾಮೆ ಮಾಡುವ ಕಾರ್ಯವೂ ನಡೆಯುತ್ತದೆ. ಕಡೆಗೆ ಯಾವಾಗಲೋ ಸಿಗುವ ಪರಿಹಾರ ಮಾತ್ರ ಹಾನಿಗೊಂಡ ಸ್ಥಳವನ್ನು ಮೊದಲಿನ ಸ್ಥಿತಿಗೆ ತರುವುದಕ್ಕೂ ಸಾಲುವುದಿಲ್ಲ.
ಸರ್ಕಾರದ ಈಗಿನ ನಿರ್ದೇಶನದ ಪ್ರಕಾರ, ಸಂಪೂರ್ಣ ಹಾನಿಗೊಂಡ ಪಕ್ಕಾ ಮನೆಗೆರೂ35 ಸಾವಿರ ಮತ್ತು ಕಚ್ಚಾ ಮನೆಗೆರೂ15 ಸಾವಿರ, ತೀವ್ರವಾಗಿ ಧಕ್ಕೆಗೊಂಡ ಪಕ್ಕಾ ಮನೆಗೆರೂ6,300 ಮತ್ತು ಕಚ್ಚಾ ಮನೆಗೆರೂ3,200 ಪರಿಹಾರ ನೀಡಬಹುದು. ಭಾಗಶಃ ಹಾನಿಗೊಳಗಾದ ಪಕ್ಕಾ ಅಥವಾ ಕಚ್ಚಾ ಮನೆಗೆ ್ಙ1,900, ಮಳೆಯಿಂದ ನಷ್ಟಕ್ಕೀಡಾದ ಗುಡಿಸಲಿಗೆರೂ2,500 ಮತ್ತು ವಾಸ್ತವ್ಯದ ಮನೆಗೆ ಸೇರಿಕೊಂಡಿರುವ ಕೊಟ್ಟಿಗೆಗೆರೂ1,250 ಪರಿಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶವಿದೆ.
ಈಗ ಸದ್ಯ ಈ ನಿಯಮಾವಳಿಯಲ್ಲಿ ಬದಲಾವಣೆ ಆಗಿದ್ದು, ಪಕ್ಕಾ ಮನೆಗೆ ಸಂಪೂರ್ಣ ನಷ್ಟ ಉಂಟಾದರೆರೂ70 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಆ ಆದೇಶ ಇನ್ನೂ ತಮಗೆ ಬಂದಿಲ್ಲ ಎಂದು ಸ್ಥಳೀಯ ಕಂದಾಯ ಇಲಾಖೆಯ ಮೂಲಗಳು ತಿಳಿಸುತ್ತವೆ.
ಧರೆ ಕುಸಿದು ತೋಟ ಅಥವಾ ಗದ್ದೆಗೆ ಹಾನಿಯಾದರೆ ಬೆಳೆ ನಷ್ಟಕ್ಕೆ ಪರಿಹಾರ ಸಿಗಬಹುದೇ ವಿನಃ ಬೇರೆ ರೀತಿಯ ಪರಿಹಾರ ಸಿಗಲಾರದು. ಅದರಂತೆ ವಾಸ್ತವ್ಯದ ಮನೆಯಿಂದ ಪ್ರತ್ಯೇಕವಾಗಿರುವ ಕೊಟ್ಟಿಗೆ ಮನೆ, ಬಚ್ಚಲು ಮನೆ ಮತ್ತಿತರ ಉಪಗೃಹಗಳಿಗೆ ಹಾನಿಯಾದರೆ ಪರಿಹಾರ ದೊರೆಯುವುದಿಲ್ಲ ಎಂಬ ವಿವರ ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಲಭ್ಯವಾಗುತ್ತದೆ.
`ಇಷ್ಟೆಲ್ಲ ನಿಯಮಾವಳಿಗಳ ಅಡಿಯಲ್ಲಿ ಬಂದ ನಂತರವಷ್ಟೇ ದೊರೆಯುವ ಪರಿಹಾರದ ಮೊತ್ತವಾದರೂ ಕುಸಿದ ಮನೆಯ ಹಾಳಾದ ಸಾಮಗ್ರಿಗಳನ್ನು ತೆರವು ಮಾಡಲಿಕ್ಕಾದರೂ ಸಾಕಾಗದು. ಅದರಲ್ಲಿಯೂ ಭಾಗಶಃ ಹಾನಿಗೊಳಗಾದ ಮನೆಗೆ ನೀಡುವ ಪರಿಹಾರವಂತೂ ಯಾವ ಮೂಲೆಗೆ ಸಾಕಾಗುತ್ತದೆ' ಎಂಬುದು ಸ್ಥಳೀಯರ ಪ್ರಶ್ನೆ.
ಮಳೆಗಾಲದಲ್ಲಿ ಮಲೆನಾಡಿನಲ್ಲಿ ಉದ್ಭವಿಸುವ ಅನಿರೀಕ್ಷಿತ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಅತಿವೃಷ್ಟಿಯ ಹಾನಿಗೆ ಸರ್ಕಾರ ಇನ್ನಷ್ಟು ಉದಾರವಾಗಿ ನೆರವಿನ ಹಸ್ತ ಚಾಚಬೇಕು ಎಂಬುದು ತಾಲ್ಲೂಕಿನ ಜನ ಸಾಮಾನ್ಯರ ಬೇಡಿಕೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕನಿಷ್ಠ ಪಕ್ಷ ಗಟ್ಟಿಯಾದ ಸೂರು ನಿರ್ಮಿಸಿಕೊಳ್ಳಲಾದರೂ ಅಗತ್ಯವಾದ ಸಹಾಯ ಆಡಳಿತ ನಡೆಸುವವರಿಂದ ದೊರೆಯಬೇಕು ಎಂಬುದು ಅವರ ಆಗ್ರಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.