ಕುಮಟಾ: ‘ಕಳೆದ ಹವು ವರ್ಷಗ ಳಿಂದ ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ರೈತರ ಅರಣ್ಯ ಹಕ್ಕು ಪಡೆಯುವ ಅರ್ಜಿಗಳಿಗೆ ಸೂಕ್ತ ದಾಖಲೆಗಳಿದ್ದರೂ ಅದನ್ನು ತಿರಸ್ಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಕ್ರಮ ವಿರೋಧಿಸಿ ಡಿ. 6 ರಂದು ಕುಮಟಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಬಿ.ಜೆ.ಪಿ ಕಾರ್ಯದರ್ಶಿ ಸೂರಜ್ ನಾಯ್ಕ ಸೋನಿ ಹೇಳಿದರು. ಅತಿಕ್ರಮಣದಾರರ ಅರ್ಜಿಯನ್ನು ತಿರಸ್ಕರಿಸಿದ ಸರ್ಕಾದರ ಕ್ರಮದ ಕುರಿತು ಸೋಮವಾರ ತಹಶೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ತಾಲ್ಲೂಕಿನ ಕೂಜಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಜನರು ಸೇರಿದಂತೆ ಒಟ್ಟೂ ಸಮಾರು 30 ಜನರ ಅರಣ್ಯ ಹಕ್ಕು ಪಡಡೆಯುವ ಅರ್ಜಿಯನ್ನು 75 ವರ್ಷಗ ಹಿಂದಿನ ದಾಖಲೆ ಇಲ್ಲ ಎಂಬ ಕಾರಣ ನೀಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅರಣ್ಯ ಹಕ್ಕು ಮಂಜೂರಾತಿ ನೀಡುವಾಗ ಮೂರು ತಲೆಮಾರಿನ ದಾಖಲೆಯನ್ನು ನಿಖರವಾಗಿ ಪರಿಗಣಿಸಬಾರದು ಎನ್ನುವ ಮಾತು ಹೇಳುತ್ತಲೇ ಬಂದರೂ ಅತಿಕ್ರಮಣದಾರರ ಅರ್ಜಿ ತಿರಸ್ಕರಿಸುವ ಕ್ರಮ ಮಂದುವರಿದಿದೆ ಎಂದು ಆರೋಪಿಸಿದರು.
ದಿವಂಗತ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಗೌರಿ ಶಿವು ಮುಕ್ರಿ ಹಾಗೂ ಸಾವಿತ್ರಿ ಮಂಕಾಳು ಮುಕ್ರಿ ಎನ್ನುವವರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಜಾಗದಲ್ಲಿ ಮಾಡಿದ ಅತಿಕ್ರಮಣ ಪ್ರದೇಶಕ್ಕೆ ನೀಡಿದ ಪಟ್ಟಾ, ನಕಾಶೆ ಎಲ್ಲ ಇದ್ದರೂ ಮೂರು ತಲೆಮಾರಿನ ಮಾಹಿತಿ ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ವಾಸ್ತವಿಕವಾಗಿ ಬಡವರಿಗೆ ಅರಣ್ಯ ಹಕ್ಕು ನೀಡದೆ ಭರವಸೆ ಮಾತ್ರ ನೀಡಿ ಮೂಗಿಗೆ ತುಪ್ಪಾ ಒರೆಸುತ್ತಾ ಬಂದಿದೆ. ತಾಲ್ಲೂಕಿನ ಎಲ್ಲ ಅತಿಕ್ರಮಣದಾರರನ್ನು ಒಗ್ಗೂಡಿಸಿ ಕೊಂಡು ಮುಖ್ಯಂತ್ರಿ ಸಿದ್ದರಾಮಯ್ಯ ಕುಮಟಾ ಬಂದಾಗ ತೀವ್ರವಾಗಿ ಪ್ರತಿಭಟನೆ ನಡೆಸುವ ಮೂಲಕ ಇಲ್ಲಿಯ ಜನರ ಸಮಸ್ಯೆ ಬಗ್ಗೆ ಅವರ ಗಮನ ಸಳೆಯಲಾಗವುದು’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ವೀಣಾ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.