ADVERTISEMENT

ಮುಗಿದೀತೇ ರಂಗಮಂದಿರದ ದುರಸ್ತಿ

ನಾಗೇಂದ್ರ ಖಾರ್ವಿ
Published 22 ಅಕ್ಟೋಬರ್ 2012, 8:00 IST
Last Updated 22 ಅಕ್ಟೋಬರ್ 2012, 8:00 IST
ಮುಗಿದೀತೇ ರಂಗಮಂದಿರದ ದುರಸ್ತಿ
ಮುಗಿದೀತೇ ರಂಗಮಂದಿರದ ದುರಸ್ತಿ   

ಕಾರವಾರ: ಜಿಲ್ಲಾ ರಂಗ ಮಂದಿರ ದುರಸ್ತಿ ಕಾಮಗಾರಿ ಆರಂಭವಾಗಿ ಎರಡು ಮಳೆಗಾಲ ಮುಗಿದಿದೆ. ಇನ್ನು ಏಳು ತಿಂಗಳು ಕಳೆದರೆ ಮತ್ತೊಂದು ಮಳೆಗಾಲ ಆರಂಭವಾಗಲಿದೆ.

ಹೊಸ ರಂಗಮಂದಿರವೇ ಕಟ್ಟಬಹುದಾಗಿದ್ದ ಅವಧಿಯಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಹಾಸ್ಯಾಸ್ಪದವೆನಿಸಿದೆ. ಅಧಿಕಾರಿಗಳ ನಿರಾಶಕ್ತಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕೇವಲ ದುರಸ್ತಿ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಯನ್ನು ಕನ್ನಡ ರಾಜ್ಯೋತ್ಸವದೊಳಗಾಗಿ ಪೂರ್ಣಗೊಳಿಸುವುದಾಗಿ ಹೇಳಿದೆ.

ಆದರೆ ವೇದಿಕೆಗೆ ಪ್ಲೋರಿಂಗ್ ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು ನವೆಂಬರ್1ಕ್ಕೆ  ರಂಗಮಂದಿರ ಉದ್ಘಾಟನೆ ಸಜ್ಜುಗೊಳ್ಳುವುದು ಅನುಮಾನವಾಗಿದೆ. ಕೊಟ್ಟ ಮಾತಿಗೆ ತಪ್ಪಬಾರದು ಎನ್ನುವ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದೆ. ಆದರೆ, ಸಣ್ಣಪುಟ್ಟ ನ್ಯೂನ್ಯತೆಗಳು ಹಾಗೆಯೇ ಉಳಿದುಬಿಡುವ ಸಾಧ್ಯತೆ ಇದೆ.

ರೂ 1.22 ಕೋಟಿ: ರಂಗ ಮಂದಿರ ದುರಸ್ತಿಗೆ ಮೊದಲು ರೂ 72 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಮುಂಭಾಗದ ವಿನ್ಯಾಸ ಮತ್ತಷ್ಟು ಆಕರ್ಷಕಗೊಳಿಸಲು ಜಿಲ್ಲಾಡಳಿತ ಮತ್ತೆ ರೂ 50 ಲಕ್ಷ ಬಿಡುಗಡೆ ಮಾಡಿದೆ.

ಮುಗಿದ ಕಾಮಗಾರಿ: ರಂಗ ಮಂದಿರದಲ್ಲಿ ಸದ್ಯ ಪಾಲ್ ಸಿಲಿಂಗ್, ಹೊಸ ಆಸನ ಮತ್ತು ಹೊರಗೆ ಪ್ಲೋರಿಂಗ್ ಕಾರ್ಯ ಮುಗಿದಿದೆ. ವಾತಾನುಕೂಲ ವ್ಯವಸ್ಥೆ, ಲೈಟ್ಸ್, ಉತ್ಕ್ರಷ್ಟ ದರ್ಜೆಯ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ.
ಕಳಪೆ ಕಾಮಗಾರಿ: ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಮೇಲ್ಛಾವಣಿಯಲ್ಲಿ ಸೋರಿಕೆ ಕಂಡುಬಂದಿದೆ. ಸೋರಿಕೆ ಆರಂಭವಾಗಿದ್ದರಿಂದ ಪಾಲ್‌ಸಿಲಿಂಗ್ ಮೇಲೆ ನೀರು ಬಿದ್ದು ಅದು ಕುಸಿದು ಬೀಳುವ ಹಂತ ತಲುಪಿತ್ತು. ಬೀಳುವ ಹಂತದಲ್ಲಿದ್ದ ಭಾಗವನ್ನು ಈಗ ದುರಸ್ತಿ ಮಾಡಿರುವುದು ಸ್ಥಳಕ್ಕೆ ಭೇಟಿ ನೀಡಿದ ~ಪ್ರಜಾವಾಣಿ~ ಕಂಡುಬಂತು.

`ರಂಗಮಂದಿರದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈಚೆಗೆ ಜಿಲ್ಲಾಧಿಕಾರಿ ಇಂಕೊಂಗ್ಲಾ ಜಮೀರ್ ಭೇಟಿ ನೀಡಿ ಅ. 29ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಅಷ್ಟರೊಳಗೆ ಕಾಮಗಾರಿ ಪೂರ್ಣಗೊಂಡ ನವೆಂಬರ್ 1ರಂದು ರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿದೆ~ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೂಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.