ADVERTISEMENT

‘ವಿಕಾಸ ಪರ್ವದಲ್ಲಿ ಪಾಲ್ಗೊಳ್ಳುತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:33 IST
Last Updated 14 ಮಾರ್ಚ್ 2018, 9:33 IST

ಹಳಿಯಾಳ: ‘ಪಟ್ಟಣದಲ್ಲಿ ಮಾರ್ಚ್‌ 15ರಂದು ನಡೆಯಲಿರುವ ಜೆಡಿಎಸ್ ಪಕ್ಷದ ವಿಕಾಸಪರ್ವ ಯಾತ್ರೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೈತಾನ ಬಾರಬೋಜಾ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಣಯಗಳಿಗೆ ನಾವು ಬದ್ಧರಿದ್ದೇವೆ’ ಎಂದರು.

‘ಹಳಿಯಾಳ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನನ್ನ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆ ಗೊಂಡಿದ್ದ ಉದ್ಯಮಿ ಹಾಗೂ ಪಕ್ಷದ ಘೋಷಿತ ಅಭ್ಯರ್ಥಿ ಕೆ.ಆರ್.ರಮೇಶ ಅಂದಿನಿಂದ ಇಂದಿನವರೆಗೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ನಾಲ್ಕಕ್ಕೂ ಹೆಚ್ಚು ಅಧ್ಯಕ್ಷರು ಪದಾಧಿಕಾರಿಗಳ ಬದಲಾವಣೆ ಮಾಡಿಸಿ ಪಕ್ಷ ಸಂಘಟನೆಗೆ ಹಾನಿ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಈಗಾಗಲೇ ಈ ಹಿಂದಿನ ಪದಾಧಿಕಾರಿಗಳು ಕೆ.ಆರ್.ರಮೇಶ ವರ್ತನೆಗೆ ಬೇಸತ್ತು ಪಕ್ಷ ತೊರೆದಿದ್ದಾರೆ. ನಾನು ಪಕ್ಷ ತೊರೆಯುವ ಸರದಿ ಬಂದಿದೆ’ ಎಂದರು.

ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕೊಳದಾರ ಮುಖಂಡ ಶಾಂತಾರಾಮ ಜಾವಳೇಕರ, ದಾವಲಸಾಬ ಅಂಗಡಿ, ನಸರುಲ್ಲಾಖಾನ್‌, ಆನಂದ ವಡ್ಡರ, ಪರಶುರಾಮ ಮೇತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.