ಭಟ್ಕಳ: `ವಿದ್ಯಾರ್ಥಿಗಳು ಶಿಸ್ತು, ಸರಳತೆಯನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಅಂದುಕೊಂಡ ಗುರಿಯನ್ನು ಸಾಧಿಸಿ ಉತ್ತಮ ಪ್ರಜೆಯಾಗಿ ಬಾಳಬಹುದು' ಎಂದು ತಹಶೀಲ್ದಾರ ಡಾ.ಮಧುಕೇಶ್ವರ ಹೇಳಿದರು.
ಪಟ್ಟಣದ ಬಂದರ್ ರಸ್ತೆಯಲ್ಲಿರುವ ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಿಪಿಐ ಕೆ.ಯು. ಬೆಳ್ಳಿಯಪ್ಪ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಕಾಲಹರಣ ಮಾಡದೇ ಶಿಕ್ಷಣದತ್ತ ಗಮನಹರಿಸಿ ಗುರಿಯನ್ನು ಮುಟ್ಟಲು ಶ್ರಮಿಸಬೇಕು ಎಂದರು.
ಟ್ರಸ್ಟಿನ ಅಧ್ಯಕ್ಷ ಕ್ಯಾಪ್ಟನ್ ಕೆ.ಆರ್. ನಾಯ್ಕ `ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ' ಎಂದರು. ಪ್ರಾಚಾರ್ಯ ಜಿ.ಕೆ.ಶೇಟ್, ಉಪನ್ಯಾಸಕ ಆರ್.ಎಂ. ಹೆಗಡೆ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ಎಂ.ಕೆ.ನಾಯ್ಕ ಮಾತನಾಡಿದರು.
ಟ್ರಸ್ಟಿನ ಕಾರ್ಯದರ್ಶಿ ಅರ್ಚನಾ ಸ್ವಾಗತಿಸಿದರು. ಪ್ರಾಂಶುಪಾಲ ಅಶೋಕ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ನಾಯ್ಕ ವಂದಿಸಿದರು. ರಾಮ ನಾಯ್ಕ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.