ADVERTISEMENT

ಶತಮಾನದ ನಂತರ ಭಾವೈಕ್ಯದ ರಥೋತ್ಸವ

ನಾಗೇಂದ್ರ ಖಾರ್ವಿ
Published 7 ಫೆಬ್ರುವರಿ 2013, 6:59 IST
Last Updated 7 ಫೆಬ್ರುವರಿ 2013, 6:59 IST
ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದೇವಿ ರಥೋತ್ಸವಕ್ಕೆ ನಿರ್ಮಾಣವಾಗುತ್ತಿರುವ ರಥ
ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದೇವಿ ರಥೋತ್ಸವಕ್ಕೆ ನಿರ್ಮಾಣವಾಗುತ್ತಿರುವ ರಥ   

ಸಾಂಬ್ರಾಣಿ (ಹಳಿಯಾಳ ತಾಲ್ಲೂಕು): ಕಾಳಿ ನದಿ ತೀರದಲ್ಲಿರುವ ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಶತಮಾನದ ನಂತರ ನಡೆಯಲಿರುವ ರಥೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಗ್ರಾಮದೇವತೆಯರಾದ ದ್ಯಾಮವ್ವಾ ಮತ್ತು ದುರ್ಗವ್ವಾ ದೇವಿಯ ರಥೋತ್ಸವ ಇದೇ 15ರಂದು  ನಡೆಯಲಿದೆ.

ಗ್ರಾಮದೇವಿ ದೇವಸ್ಥಾನದ ವ್ಯಾಪ್ತಿಗೆ ಬರುವ ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕನಕೊಪ್ಪ ಗ್ರಾಮಗಳು ರಥೋತ್ಸವಕ್ಕೆ ಸಿಂಗಾರಗೊಳ್ಳುತ್ತಿದ್ದು, ಹಬ್ಬದ ವಾತಾವರಣ ಮನೆಮಾಡಿದೆ.

ಸಾಂಬ್ರಾಣಿ ರಥೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಸ್ವಾದಿ ಅರಸ ಸಾಂಬ ಸದಾಶಿವರಾಜನ ಆಳ್ವಿಕೆಯಲ್ಲಿ ಸಾಂಬ್ರಾಣಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಸಾಂಬ್ರಾಣಿಯಿಂದ ರಾಜ್ಯದ ವರಮಾನಕ್ಕೆ ಪ್ರತಿ ತಿಂಗಳು ರೂ. 2 ಲಕ್ಷ ಜಮೆ ಆಗುತ್ತಿತ್ತು. ಅಂದು ಸಂಪದ್ಭರಿತವಾಗಿದ್ದ ಸಾಂಬ್ರಾಣಿಯಲ್ಲಿ ಜಾತ್ರೆ, ರಥೋತ್ಸವಗಳು ವೈಭವದಿಂದ ನಡೆಯುತ್ತಿದ್ದವು. ಕಾಲಕ್ರಮೇಣ ಇವು ನಿಂತುಹೋದವು.  ಆಚರಣೆ ಹೇಗೆ ನಿಂತು ಹೋಯಿತು ಎನ್ನುವ ಬಗ್ಗೆ ಗ್ರಾಮದ ಹಿರಿಯರ ಬಳಿ ಸ್ಪಷ್ಟವಾದ ಮಾಹಿತಿ ಇಲ್ಲ.

ಸ್ವಾದಿ ಅರಸರ ಆಳ್ವಿಕೆಯ ನಂತರ ಪ್ಲೇಗ್‌ನಂತಹ ಮಹಾಮಾರಿ ಕಾಣಿಸಿಕೊಂಡು ಜನ ಗುಳೆ ಹೋದರು. ಗ್ರಾಮಗಳೆಲ್ಲ ಖಾಲಿಯಾಗಿ ಆಚರಣೆಗೆ ಜನರಿಲ್ಲದೆ ರಥೋತ್ಸವ ನಿಂತು ಹೋಗಿರಬಹುದು ಎನ್ನುತ್ತಾರೆ ಹಿರಿಯರು.

ರಥೋತ್ಸವ ನಿಂತು ಹೋಗಿದ್ದರೂ ಗ್ರಾಮದೇವಿಯ ವಾರ್ಷಿಕೋತ್ಸವ ಮಾತ್ರ ನಿರಂತರವಾಗಿ ನಡೆದುಕೊಂಡು ಬಂದಿದೆ. ರಥೋತ್ಸವಕ್ಕೆ ಅಂದಾಜು ರೂ. 15 ಲಕ್ಷ ವೆಚ್ಚದಲ್ಲಿ ಐದು ಅಂಕಣದ, ಸುಮಾರು 70 ಅಡಿ ಎತ್ತರದ ರಥ ನಿರ್ಮಾಣವಾಗುತ್ತಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹುಲಕೊಪ್ಪದ ವಿಶ್ವಕರ್ಮ ಸಮುದಾಯದವರು ರಥ ನಿರ್ಮಿಸುವ ಹೊಣೆ ಹೊತ್ತಿದ್ದಾರೆ.

ಆರು ಚಕ್ರದ ರಥದ ಐದೂ ಅಂಕಣಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಮುನಿಗಳ, ಮಹಾಪುರುಷರ, ಸಮಾಜ ಸೇವಕರ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗುತ್ತಿದೆ.
ರಥದ ಸುತ್ತಲೂ ಪರಿಸರ ಜಾಗೃತಿಯ ಸಂದೇಶ ಸಾರುವ ಬರಹಗಳನ್ನೂ ಬರೆಯಲು ಗ್ರಾಮಸ್ಥರು ನಿರ್ಧರಿಸಿದ್ದು, ಇದು ಭಾವೈಕ್ಯದೊಂದಿಗೆ ಪರಿಸರ ಜಾಗೃತಿ ಮೂಡಿಸುವ ರಥೋತ್ಸವವೂ ಆಗಲಿದೆ.

ಪ್ರಾಣಿಬಲಿ ನಿಷೇಧ: ಶತಮಾನಗಳ ಹಿಂದೆ ಗ್ರಾಮದೇವಿಯ ರಥೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಶತಮಾನದ ನಂತರ ನಡೆಯುತ್ತಿರುವ ರಥೋತ್ಸವದಲ್ಲಿ ಪ್ರಾಣಿ ಬಲಿ ನಿಷೇಧಿಸುವ ನಿರ್ಣಯವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.

ಜಾತ್ರೆಯ ಹಿನ್ನೆಲೆಯಲ್ಲಿ  ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕನಕೊಪ್ಪ ಗ್ರಾಮಸ್ಥರು ಮಾಂಸಾಹಾರನ್ನು ತ್ಯಜಿಸಿದ್ದಾರೆ. ಕಳೆದ ತಿಂಗಳ 25ರಿಂದಲೇ ಗ್ರಾಮಸ್ಥರು ಈ ಆಚರಣೆ ಕೈಗೊಂಡಿದ್ದು, ರಥೋತ್ಸವದವರೆಗೆ ಮುಂದುವರಿಯಲಿದೆ. ನಾಲ್ಕು ಗ್ರಾಮದಲ್ಲಿರುವ ಎಲ್ಲ ಧರ್ಮದವರೂ ಈ ಆಚರಣೆ ಪಾಲಿಸುತ್ತಿರುವುದು ವಿಶೇಷ.

`ಗ್ರಾಮದೇವಿಯ ಅಪ್ಪಣೆಯ ಮೆರೆಗೆ ನಾಲ್ಕು ಗ್ರಾಮದ ಮುಖಂಡರು ಸೇರಿ ರಥೋತ್ಸವ ನಡೆಸಲು ನಿರ್ಧರಿಸಿದ್ದೇವೆ. ಗ್ರಾಮಸ್ಥರ ಮೇಲೆ ಒತ್ತಾಯವಾಗಿ ಯಾವುದನ್ನೂ ಹೇರುತ್ತಿಲ್ಲ. ಎಲ್ಲರೂ ಸ್ವಇಚ್ಛೆಯಿಂದ ಸಿದ್ಧತೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ' ಎನ್ನುತ್ತಾರೆ ರಥೋತ್ಸವದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಇಂದಿರಾಕಾಂತ ಕಾಮಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.