ಶಿರಸಿ: ಪ್ರೊ ಕಬಡ್ಡಿ ಆಟಗಾರರ ಪಾಲ್ಗೊಳ್ಳುವಿಕೆಯಲ್ಲಿ ಪುರುಷರ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ ಮಾ.16 ಹಾಗೂ 17ರಂದು ಇಲ್ಲಿನ ಅರಣ್ಯ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.
ಒಟ್ಟು 18 ಆಹ್ವಾನಿತ ತಂಡಗಳು ಭಾಗವಹಿಸಲಿವೆ. ವಿಶೇಷ ಆಕರ್ಷಣೆಯಾಗಿ ಪ್ರೊ ಕಬ್ಬಡ್ಡಿ ಆಟಗಾರರಾದ ಸುಕೇಶ್ ಹೆಗಡೆ, ಪ್ರಶಾಂತ್ ರೈ ಹಾಗೂ ಹರೀಶ ನಾಯ್ಕ, ಯು ಮುಂಬಾ ತಂಡದ ಕೋಚ್ ರವಿ ಶೆಟ್ಟಿ, ಪುನೇರಿ ಪಲ್ಟನ್ ತಂಡದ ಬಿ.ಸಿ.ರಮೇಶ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡದ ಜಗದೀಶ್ ಕುಂಬ್ಳೆ ಪಾಲ್ಗೊಳ್ಳುವರು.
ವಿಘ್ನೇಶ್ವರ ಸ್ಪೋರ್ಟ್ಸ್ ಕ್ಲಬ್ ಹಾಗೂ ಜಿಲ್ಲಾ ಅಮೆಚ್ಯೂರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಸ್ಪೋರ್ಟ್ಸ್ ಕ್ಲಬ್ನ ನಾಲ್ಕು ತಂಡಗಳು ಆಡಲಿವೆ. ಆಟಗಾರರಿಗೆ ಮಾ.6ರಿಂದ 15ರವರೆಗೆ ತರಬೇತಿ ನೀಡಲಾಗುತ್ತಿದೆ. ಪಂದ್ಯಾವಳಿಯ ಮೊದಲ ಬಹುಮಾನ ₹ 30ಸಾವಿರ, ದ್ವಿತೀಯ ₹ 20ಸಾವಿರ ಹಾಗೂ ತೃತೀಯ ಮತ್ತು ಚತುರ್ಥ ತಲಾ ₹ 10ಸಾವಿರ ನಿಗದಿಪಡಿಸಲಾಗಿದೆ.
ಪ್ರೇಕ್ಷರ ಗ್ಯಾಲರಿಯನ್ನು ₹ 3.5 ಲಕ್ಷ ವೆಚ್ಚದಲ್ಲಿ, ಸುಮಾರು 10ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಘ್ನೇಶ್ವರ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಮಂಜೇಶ ಅಜ್ಜೀಬಳ, ಅಧ್ಯಕ್ಷ ರಮಾನಂದ ನಾಯ್ಕ, ಖಜಾಂಚಿ ಮನೋಜ್ ನಾಯ್ಕ, ಕೋಚ್ ನಾಗರಾಜ ಮಡಿವಾಳ, ಮಂಜುನಾಥ ಆಚಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.