ADVERTISEMENT

ಶಿರಸಿ ಎಂಇಎಸ್‌ ವಾಣಿಜ್ಯ ಕಾಲೇಜು ಚಾಂಪಿಯನ್‌

ಉತ್ತರಕನ್ನಡ ವಲಯ ಮಟ್ಟದ ಯುವಜನೋತ್ಸವ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 11:22 IST
Last Updated 26 ಸೆಪ್ಟೆಂಬರ್ 2013, 11:22 IST

ಕುಮಟಾ: ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಮುಕ್ತಾಯಗೊಂಡ ಕರ್ನಾಟಕ ವಿವಿ ಉತ್ತರ ಕನ್ನಡ ವಲಯ ಮಟ್ಟದ ಯುವಜನೋತ್ಸವದಲ್ಲಿ ಶಿರಸಿ ಎಂಇಎಸ್‌ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರನ್ನರ್‌ಅಪ್‌ ಪ್ರಶಸ್ತಿ ಗಳಿಸಿತು. ಆತಿಥೇಯ ಕುಮಟಾದ ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯ ಮೂರನೇ ಸ್ಥಾನ ಪಡೆಯಿತು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಕಲಾವಿದ ಕೆಕ್ಕಾರದ ಜಿ.ಡಿ.ಭಟ್ಟ, ‘ಕಲೆ, ಸಂಸ್ಕೃತಿ, ಸೃಜನಶೀಲತೆಯ ಸ್ಪರ್ಶ ಇಲ್ಲದಿದ್ದರೆ ಬದುಕು ಸಮಾಜಮುಖಿಯಾಗಲಾರದು’ ಎಂದರು.

‘ಈಗಿನ ಶರವೇಗದ ಜೀವನ ಕ್ರಮದಲ್ಲಿ ಪಠ್ಯೇತರ ಚಟುವಟಿಕೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ತರುತ್ತವೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವಿ.ಕೆ.ಹಂಪಿಹೋಳಿ ಅವರು, ‘ಎಂಟು ತಾಸು ಮೊಬೈಲ್‌ ದೂರವಾಣಿ, ನಾಲ್ಕು ತಾಸು ದೂರದರ್ಶನದೊಂದಿಗೆ ಕಳೆದರೂ ನಮ್ಮೆಲ್ಲ ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಗಮನ ಸಳೆಯುವ ಪ್ರದರ್ಶನ  ನೀಡಿದ್ದಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಿರ್ಣಾಯಕರ ಪರ ಮಾತನಾಡಿದ ಮೊರಾರ್ಜಿ ಶಾಲೆ ಪ್ರಾಚಾರ್ಯ ಶ್ರೀನಿವಾಸ ನಾಯ್ಕ ಅವರು, ‘ಹೆಚ್ಚಿನ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ತುರುಸಿನ ಸ್ಪರ್ಧೆ, ರಂಗ ಶಿಸ್ತು ಇಲ್ಲದಿರುವುದು ವಿಷಾದದ ಸಂಗತಿ’ ಎಂದರು.

ವಿದ್ಯಾರ್ಥಿಗಳ ಪರವಾಗಿ ಶಿರಸಿ ಎಂಇಎಸ್‌ ವಾಣಿಜ್ಯ ಮಹಾವಿದ್ಯಾಲಯದ ನಾರಾಯಣ ಹೆಗಡೆ ಹಾಗೂ ಕಲಾ–ವಿಜ್ಞಾನ ಮಹಾವಿದ್ಯಾಲಯದ ಅಶ್ವಿನಿ ಭಟ್ಟ ಅನಿಸಿಕೆ ತಿಳಿಸಿದರು.

ಡಾ. ಮಹೇಶ ಅಡಕೋಳಿ, ಡಾ. ಪ್ರಕಾಶ ಪಂಡಿತ, ಎಂ.ಜಿ.ನಾಯ್ಕ, ಡಾ. ಸೋಮಶೇಖರ ಗಾಂವ್ಕರ್‌, ಡಾ.ಜಿ.ಎಲ್‌.ಹೆಗಡೆ, ವಿ.ಎಂ.ಪೈ, ಡಾ.ರೇವತಿ ರಾವ್‌, ಹೊನ್ನಾವರ ಎಸ್‌ಡಿಎಂ ಕಾಲೇಜಿನ ಎಂ ಜಿ ಹೆಗಡೆ, ರಂಗಕರ್ಮಿ ಅನಂತ ನಾಯ್ಕ ಅಂಕೋಲಾ ಮೊದಲಾದವರು ಹಾಜರಿದ್ದರು. ಪ್ರಾಧ್ಯಾಪಕ ಡಾ. ಜಿ ಟಿ ಕುಚಿನಾಡ ಸ್ವಾಗತಿಸಿದರು. ಅಶ್ವಿನಿ ಮುಕ್ರಿ ಪ್ರಾರ್ಥನೆ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.