ADVERTISEMENT

ಸರ್ಕಾರದ ವಶಕ್ಕೆ ದೇವಸ್ಥಾನ: ವಿರೋಧ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:20 IST
Last Updated 13 ಡಿಸೆಂಬರ್ 2013, 6:20 IST

ಭಟ್ಕಳ: ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದಂತೆ ಭಟ್ಕಳದ ಇತಿಹಾಸ ಪ್ರಸಿದ್ದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ಎಲ್ಲಾ ದೇವಸ್ಥಾನಗಳನ್ನು  ತಹಶೀಲ್ದಾರರು ವಶಕ್ಕೆ ತೆಗೆದುಕೊಳ್ಳುವುದನ್ನು ವಿರೋಧಿಸಿ ಧರ್ಮದರ್ಶಿ ಮಂಡಳಿಯ ಸುರೇಂದ್ರ ಶಾನುಭಾಗ್‌ ನೇತೃತ್ವದಲ್ಲಿ ನೂರಾರು ಜನರು ತಹಶೀಲ್ದಾರ್‌ ಜಿ.ಎಂ ಬೋರ್ಕರ್‌ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಹಿಂದಿನಿಂದಲೂ ಈಗಿರುವ ದೇವಸ್ಥಾನದ ಆಡಳಿತ ಮಂಡಳಿಗಳು ಸಂಪ್ರದಾಯಬದ್ಧವಾಗಿ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಧಾರ್ಮಿಕ ಕಾರ್ಯ, ರಥೋತ್ಸವಗಳನ್ನು ಯಾವುದೇ ಚ್ಯುತಿ ಬಾರದಂತೆ ಸಾಂಗವಾಗಿ ನಡೆಸಿಕೊಂಡು ಬರುತ್ತಿದೆ. ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಲೋಪವಾದರೂ ಸಹ ಅದು ಊರಿಗೆ ಕಂಟಕ ಎಂಬ ನಂಬಿಕೆ ಭಟ್ಕಳದ ಗ್ರಾಮದೇವತೆ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳ ಎಲ್ಲಾ ವರ್ಗದ ಭಕ್ತ ವರ್ಗದವರಲ್ಲಿದೆ.

ಹೀಗಿರುವಾಗ ದೇವಸ್ಥಾನಗಳ ಆಡಳಿತವನ್ನು ಸರ್ಕಾರ ಪಡೆಯಲು ಮುಂದಾಗಿರುವುದು ಸರಿಯಲ್ಲ. ಅಲ್ಲದೇ ಮುಂಬರುವ ಆಡಳಿತಾಧಿಕಾರಿಗಳಿಗೆ ರಥೋತ್ಸವ, ಧಾರ್ಮಿಕ ಕಾರ್ಯಗಳನ್ನು ಮಾಡಲು ಅನುಭವದ ಕೊರತೆ ಇರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿಂದೂ ಧರ್ಮ, ದೇವಸ್ಥಾನಗಳು ಭಕ್ತರ ನಂಬಿಕೆ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಬಂದ ಸೂಚನೆಯಂತೆ ದೇವಸ್ಥಾನಗಳ ಅಧಿಕಾರವನ್ನು ತಹಶೀಲ್ದಾರ್‌ ತಮ್ಮ  ವ್ಯಾಪ್ತಿಗೆ ಪಡೆದುಕೊಳ್ಳದಂತೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಯಾ ಗುವವರೆಗೆ ಈಗಿರು ವಂತೆಯೇ ಆಡಳಿತ ಮಂಡಳಿ ಮುಂದುವರಿಯಲು ಅವಕಾಶ ನೀಡಬೇಕು. ಬಲವಂತವಾಗಿ ದೇವಸ್ಥಾನದ ಆಡಳಿತವನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದಲ್ಲಿ ಉಗ್ರ ರೂಪದ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಬಾಲಕೃಷ್ಣ ಶಾಸ್ತ್ರ, ಎ.ಎನ್‌.ಪೈ, ಎಲ್.ಕೆ. ಮೊಗೇರ್‌, ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಪರಮೇಶ್ವರ ನಾಯ್ಕ, ವಸಂತ ಖಾರ್ವಿ, ವಕೀಲ ರಾಜೇಶ ನಾಯ್ಕ, ವೆಂಕಟೇಶ ಪ್ರಭು, ಗಣಪತಿ ನಾಯ್ಕ, ಜೆ.ಎನ್‌. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT