ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣ: ರಹಸ್ಯ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:01 IST
Last Updated 20 ಜೂನ್ 2013, 10:01 IST

ಕಾರವಾರ: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ರಹಸ್ಯವನ್ನು ಇಲ್ಲಿಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ನಿವಾಸಿ, ಹಾಲಿ ಕಾರವಾರ ಹೆಸ್ಕಾಂ ವಿಭಾಗದ ಲೈನ್‌ಮನ್ ಬೋರಯ್ಯ ಎಂಬಾತನನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣ ಕುರಿತು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಸಿಪಿಐ ಅನಂತಪದ್ಮನಾಭ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡ ತಂಡ ಸಿ.ಡಿ.ಯಲ್ಲಿದ್ದ ಅಶ್ಲೀಲ ವಿಡಿಯೋದಲ್ಲಿರುವ ಧ್ವನಿ ತಾಲ್ಲೂಕಿನ ಸುತ್ತಮುತ್ತಲ ಪರಿಸರದ ಕನ್ನಡ ಆಡು ಭಾಷೆ ಎಂಬುದನ್ನು ಮೊದಲು ಪತ್ತೆಹಚ್ಚಿದೆ. ಧ್ವನಿಯನ್ನು ಪರಿಶೀಲಿಸಿದ ಪೊಲೀಸರು ಅದು ತೋಡೂರು ಗ್ರಾಮದ ವಿಷ್ಣುದಾಸ ನಾಯ್ಕ ಮತ್ತು ಲೈನ್‌ಮನ್ ಬೋರಯ್ಯ ಅವರ ಧ್ವನಿ ಎನ್ನುವುದನ್ನು ಖಾತ್ರಿ ಪಡಿಸಿಕೊಂಡಿದೆ.

ಈ ಕುರಿತು ತಂಡ ವಿಷ್ಣುದಾಸಸನ್ನು ವಿಚಾರಣೆಗೊಳಪಡಿಸಿದಾಗ ಅಶ್ಲೀಲ ವಿಡಿಯೋದಲ್ಲಿರುವುದು ತನ್ನ, ಬೋರಯ್ಯ ಹಾಗೂ ತನ್ನ ಗೆಳೆಯರದ್ದು ಎನ್ನುವುದನ್ನು ಒಪ್ಪಿಕೊಂಡು, `ತೋಡೂರ ಕ್ರಾಸ್‌ನಲ್ಲಿನಲ್ಲಿರುವ ಅರವಿಂದ ಅಂಗಡಿಯ ಬಳಿ ಮಾತನಾಡಿದ್ದನ್ನು ಬೋರಯ್ಯ ಧ್ವನಿಮುದ್ರಿಸಿಕೊಂಡು ಈ ಅಶ್ಲೀಲ ಚಿತ್ರಗಳೊಂದಿಗೆ ಹೊಂದಾಣಿಕೆ ಆಗುವಂತೆ ಎಡಿಟಿಂಗ್ ಮಾಡಿದ್ದಾನೆ' ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಈ ಹೇಳಿಕೆಯ ಆಧಾರದ ಮೇಲೆ ಬೋರಯ್ಯನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದರು.

ಮೊಬೈಲ್ ಇಂಟರ್‌ನೆಟ್ ಬಳಸಿ ಅಶ್ಲೀಲ ದೃಶ್ಯವನ್ನು 2011ರಲ್ಲೆ ಡೌನ್‌ಲೋಡ್ ಮಾಡಿಕೊಂಡಿದ್ದು, ಈ ಅಶ್ಲೀಲ ದೃಶ್ಯಕ್ಕೆ ಗೆಳೆಯರ ಧ್ವನಿಯನ್ನೂ ಸೇರಿಸಿ ಬ್ಲ್ಯೂಟೂತ್ ಮುಖಾಂತರ ಬೇರೆಯವರಿಗೂ ಕಳುಹಿಸಿರುವುದಾಗಿ ಬೋರಯ್ಯ ಒಪ್ಪಿಕೊಂಡಿದ್ದಾನೆ.

ಈ ಚಿತ್ರವು ಕಾರವಾರ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣವಾಗಿರುವುದಿಲ್ಲ. ಮೂಲತಃ ಇದು ತಮಿಳು ಭಾಷೆಯ ಚಿತ್ರ ಎನ್ನುವುದನ್ನು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.

ಗ್ರಾಮೀಣ ಠಾಣೆಯ ಪಿ.ಎಸ್.ಐ ಶಿವಕುಮಾರ ಬಿ. ನಗರ ಠಾಣೆ ಪಿಎಸ್‌ಐ ಆನಂದಮೂರ್ತಿ ಪೊಲೀಸ್ ಕಾನ್‌ಸ್ಟೆಬಲ್ ಜ್ಞಾನೇಶ್ವರ ಹರಿಕಂತ್ರ, ಹನುಮಂತಪ್ಪಾ ಕಬಾಡಿ, ವಿಲಾಸ ಬಾಂದೇಕರ, ವೆಂಕಟ್ರಮಣ ನಾಯ್ಕ, ದಿನೇಶ ನಾಯಕ, ಬಂಗಾರೆಪ್ಪಾ ಓಣಿಕೇರಿ ಮತ್ತು ಸುರೇಶ ಪೂಜಾರಿ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.