ADVERTISEMENT

ಹಡಗಿನ ಅವಶೇಷಕ್ಕೆ ಮುಕ್ತಿ ಸಿಕ್ಕೀತೇ?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:50 IST
Last Updated 13 ಫೆಬ್ರುವರಿ 2012, 7:50 IST
ಹಡಗಿನ ಅವಶೇಷಕ್ಕೆ ಮುಕ್ತಿ ಸಿಕ್ಕೀತೇ?
ಹಡಗಿನ ಅವಶೇಷಕ್ಕೆ ಮುಕ್ತಿ ಸಿಕ್ಕೀತೇ?   

ಕಾರವಾರ: ಮೂರು ದಶಕದ ಹಿಂದಿನ ಮಾತು. ಅದು ಪ್ರಯಾಣಿಕರ ಹಡಗು ಆಗಿದ್ದಿದ್ದರೆ ಬಹುಶಃ ಇನ್ನೊಂದು ಟೈಟಾನಿಕ್ ದುರಂತವೇ ಆಗುತ್ತಿತ್ತು. ಆದರೆ ಅದು ಸರಕು ಸಾಗಣೆ ಹಡಗಾ ಗಿತ್ತು. ಕಾಳಿ ಸೇತುವೆಗೆ ಹಾಕಿರುವ ವಿದ್ಯುದ್ದೀಪಗಳನ್ನು ನೋಡಿ ಇದೇ ಬಂದರು ಇರಬೇಕು ಎಂದು ತಪ್ಪಾಗಿ ಭಾವಿಸಿ ಸಮೀಪ ಬಂದಿದ್ದರಿಂದ ಮುಂಬೈ ಮುಟ್ಟಬೇಕಿದ್ದ ಸರಕು ಸಾಗಣೆ ಹಡಗಿನ ಪ್ರಯಾಣ ನಗರದ ಟ್ಯಾಗೋರ ಕಡಲತೀರದಲ್ಲಿ ದುರಂತ ಅಂತ್ಯಕಂಡಿತ್ತು.

ಈ ಸರಕು ಸಾಗಣೆ ಹಡಗು ಎಷ್ಟು ದೊಡ್ಡದಾಗಿತ್ತೆಂದರೆ ಅದರ ತಳ ಭಾಗದ ಅವಶೇಷಗಳು ಇಲ್ಲಿಯ ಕಡಲ ತೀರದಲ್ಲಿ ಇನ್ನೂ ಉಳಿದು ಕೊಂಡಿವೆ. ಮರಳಿ ಚಲನೆ ಬದ ಲಾದಂತೆ ಈ ಅವಶೇಷಗಳೂ ಒಮ್ಮಮ್ಮೆ ಗೋಚರ ವಾಗುತ್ತಿರುತ್ತವೆ.

ಸಿಂಗಾಪುರ ಮೂಲದ `ಚೇರಿ ಮಾಜು~ ಎಂಬ ಹೆಸರಿನ ಸರಕು ಸಾಗಣೆ ಹಡಗು ಟಾರ್ ತುಂಬಿದ ಟಿನ್‌ಗಳನ್ನು ತುಂಬಿಕೊಂಡು ಸಿಂಗಾಪುರದಿಂದ ಮುಂಬೈನತ್ತ ಹೊರಟಿತ್ತು. ಕಾರವಾರ ಮಾರ್ಗದಿಂದ ಹೊರಟ ಹಡಗಿನ ಕ್ಯಾಪ್ಟನ್ ಸೇತುವೆಯ ಲೈಟ್‌ಗಳನ್ನು ನೋಡಿ ಇದೇ ಮುಂಬೈ ಬಂದರು ಇರಬೇಕು ಎಂದು ತಪ್ಪಾಗಿ ಭಾವಿಸಿ ಸಮೀಪ ಬರಲಾರಂಬಿಸಿದರು. ಅರಬ್ಬಿ ಸಮುದ್ರದಲ್ಲಿ ತೀರ ಪ್ರದೇಶದಿಂದ ಸುಮಾರು ಆರು ನಾಟಿಕಲ್ ಮೈಲು ದೂರದಲ್ಲಿರುವ ಕೂರ್ಮಗಡ ದ್ವೀಪದ ಸಮೀಪ ಬಂದಾಗ ಕ್ಯಾಪ್ಟನ್‌ಗೆ ತಪ್ಪಿನ ಅರಿವಾಗಿದೆ.

ಅದು ಮಧ್ಯರಾತ್ರಿ ಆಗಿದ್ದರಿಂದ ಪ್ರಯಾಣವನ್ನು ಅಲ್ಲಿಗೆ ಮೊಟಕು ಗೊಳಿಸಿ ಲಂಗರು ಹಾಕಿದರು. ಆದರೆ, ರಾತ್ರಿ ಇದ್ದಕ್ಕಿದ್ದಂತೆ ಬಿರುಗಾಳಿ ಪ್ರಾರಂಭ ವಾಯಿತು. ಬಿರುಗಾಳಿ ಪ್ರಭಾವ ಎಷ್ಟಿತ್ತೆಂದರೆ ಹಡಗಿನ ಲಂಗರು ತುಂಡಾಯಿತು. ಹಡಗನ್ನು ನಿಯಂತ್ರ ಣಕ್ಕೆ ತರಲು ಕ್ಯಾಪ್ಟನ್ ಎಂಜಿನ್ ಆರಂಭಿಸಲು ಸೂಚನೆ ನೀಡಿದರು. ಆದರೆ ಹಡಗಿನಲ್ಲಿದ್ದ ಒಂದು ಎಂಜಿನ್ ಕೈಕೊಟ್ಟಿತು. ಇದರಿಂದಾಗಿ ಹಡಗು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಬಿರುಗಾಳಿಗೆ ಸಿಕ್ಕ ಹಡಗು ದಡಕ್ಕೆ ಬಂದು ಅಪ್ಪಳಿಸಿತು.

ಕ್ಯಾಪ್ಟನ್ ಸೇರಿದಂತೆ ಹಡಗಿನಲ್ಲಿದ್ದ ಒಟ್ಟು 33 ನಾವಿಕರನ್ನು ಸ್ಥಳೀಯ ಮೀನುಗಾರರು  ರಕ್ಷಣೆ ಮಾಡಿದರು. ಒಟ್ಟಾರೆ ಸರಕು ಸಾಗಣೆ ಹಡಗಿನ ಪ್ರಯಾಣ ಇಲ್ಲೆ ಅಂತ್ಯಕಂಡಿತು. ನಂತರದ ದಿನಗಳಲ್ಲಿ ಹಡಗನ್ನು ಇಲ್ಲೆ ಒಡೆದು ಬೇರೆಡೆ ಸಾಗಿಸಲಾಯಿತು. ಆದರೆ ಅದರ ತಳದ ಕೆಲವೊಂದು ಭಾಗಗಳು ಕಡಲತೀರದಲ್ಲಿ ಹುದುಗಿದ್ದು ಇಳಿತ (ಲೋ ಟೈಡ್)ದ ಸಂದರ್ಭದಲ್ಲಿ ಗೋಚರವಾಗುತ್ತವೆ.

ಹೀಗೆ ವರ್ಷ ಹಿಂದೆ ಕಂಡುಬಂದ ಹಡಗಿನ ಫ್ಯಾನ್ ಮತ್ತು ಕ್ರೇನ್‌ನ ಒಂದು ಭಾಗವೆಂದು ಹೇಳಲಾದ ವಸ್ತು ವೊಂದು ಸಿಕ್ಕಿತ್ತು. ಜೆಸಿಬಿ ಸಹಾಯ ದಿಂದ ಈ ಅವಶೇಷಗಳನ್ನು ನಗರಸಭೆ ಆವರಣದಲ್ಲಿರುವ ಟ್ಯಾಗೋರ ರಂಗಮಂದಿರದಲ್ಲಿಡಲಾಗಿದೆ. ಫ್ಯಾನ್‌ನಲ್ಲಿ ಮೂರು ಎಲೆಗಳಿದ್ದು ಅಂದಾಜು 1.50 ಟನ್ ಭಾರವಿದೆ. ಕ್ರೇನ್‌ನ ಭಾಗ ಐದು ಟನ್‌ಗಿಂತಲೂ ಜಾಸ್ತಿ ತೂಕ ವಿದೆ.

ಈ ಹಡಗಿನ ಅವಶೇಷಗಳು ಯಾರಿಗೆ ಸಂಬಂಧಿಸಿದ್ದು ಎನ್ನುವ ಬಗ್ಗೆ ಬಂದರು ಮತ್ತು ಕಸ್ಟಮ್ಸ ಇಲಾಖೆ ಮಧ್ಯೆ ಗೊಂದಲಗಳಿರುವುದಿಂದ ಕಳೆ ದೊಂದು ವರ್ಷದಿಂದ ಅವಶೇಷಗಳು ಅನಾಥವಾಗಿವೆ. ಸದ್ಯ ನಗರಸಭೆ ಸುಪರ್ದಿಯಲ್ಲಿ ಅವಶೇಷಗಳಿದ್ದು ಕಸ್ಟಮ್ಸ ಮತ್ತು ಬಂದರು ಇಲಾಖೆ ಯಿಂದ ಅನುಮತಿ ಪಡೆದ ನಂತರವೇ ಹಡಗಿನ ಅವಶೇಷಗಳನ್ನು ಏನು ಮಾಡಬೇಕು ಎನ್ನುವ ಬಗ್ಗೆ ತೀರ್ಮಾನಿ ಸಲಾಗುವುದು ಎನ್ನುತ್ತಾರೆ ಪೌರಾ ಯುಕ್ತ ಉದಯಕುಮಾರ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.