ಶಿರಸಿ: ಹವಾಮಾನ ಮುನ್ಸೂಚನೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.
ಇದೇ 19ರಂದು 62ಮಿ.ಮೀ, 20ರಂದು 58ಮಿ.ಮೀ, 22ರಂದು 64ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27-28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 23-24ಡಿಗ್ರಿ ಸೆಲ್ಸಿಯಸ್ ಮುಂದುವರಿಯಬಹುದು. ಹಿಂದಿನ ಐದು ದಿನಗಳ ಅವಧಿಯಲ್ಲಿ 222ಮಿ.ಮೀ. ಮಳೆಯಾಗಿದ್ದು, ಗರಿಷ್ಠ ಉಷ್ಣಾಂಶ 24 ರಿಂದ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 19.5 ರಿಂದ 20.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಕೃಷಿ ಹವಾಮಾನ ಮುನ್ಸೂಚನಾ ಘಟಕ ತಿಳಿಸಿದೆ.
ಕೃಷಿ ಸಲಹೆ: ಮುಂದಿನ ವಾರದಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಇದ್ದು, ಯಾವುದೇ ಸಸ್ಯ ಸಂರಕ್ಷಣಾ ತೆಗೆದುಕೊಳ್ಳಬಾರದು. ಈಗಾಗಲೇ ಮಳೆ ಯಾಗಿರುವುದರಿಂದ ಕೂರಿಗೆ ಭತ್ತ ಬಿತ್ತನೆ ಮಾಡಬಹುದು. ನಾಟಿ ಭತ್ತದ ರೈತರು ತಮ್ಮ ಪ್ರದೇಶಕ್ಕೆ ಶಿಫಾರಸು ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ತಗ್ಗಿನಭೂಮಿಗೆ ಇಂಟಾನ್, ಅಭಿಲಾಷಾ ಹಾಗೂ ಹೇಮಾವತಿ, ಮಜಲುಭೂಮಿಗೆ ಕೆ.ಎಚ್.ಆರ್.ಎಸ್-26 ತಳಿಗಳನ್ನು, ಮತ್ತು ಬೆಟ್ಟುಭೂಮಿಗೆ ಅಮೃತ ಅಥವಾ ಪ್ರಸನ್ನ ತಳಿಗಳನ್ನು ಆಯ್ಕೆ ಮಾಡಬಹುದು. ಕೂರಿಗೆಯಿಂದ ಭತ್ತವನ್ನು ಬಿತ್ತಿದ ಪ್ರದೇಶದಲ್ಲಿ ಕಳೆಗಳ ನಿಯಂತ್ರಣಕ್ಕೆ ಬ್ಯುಟಾಕ್ಲೋರ್ ಕಳೆನಾಶಕವನ್ನು 4 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಬಿತ್ತಿದ ದಿನ ಅಥವಾ ಮರುದಿನ ನೆಲ ನೆನೆಯುವಂತೆ ಸಿಂಪರಣೆ ಮಾಡಬೇಕು. ಭತ್ತದ ನಾಟಿಗೆ ಸಸಿಮಡಿ ಹಾಕಿಕೊಳ್ಳಲು ಸೂಕ್ತ ಕಾಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.