ADVERTISEMENT

ಹೊನ್ನಾವರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಏ.11ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:31 IST
Last Updated 29 ಮಾರ್ಚ್ 2018, 12:31 IST

ಹೊನ್ನಾವರ: ತಾಲ್ಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಏಪ್ರಿಲ್ 11ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.

ಬುಧವಾರ ಇಲ್ಲಿ ನಡೆದ ಸಮ್ಮೇಳನದ ಲಾಂಛನ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ, ‘ಸಮ್ಮೆಳನದ ಜಾಗಕ್ಕೆ ಕೃಷ್ಣಾನಂದ ಕಾಮತ ನಗರ ಹಾಗೂ ವೇದಿಕೆಗೆ ಕನ್ನಿಕಾ ಹೆಗಡೆ ವೇದಿಕೆ ಎಂದು ಹೆಸರಿಸಲಾಗಿದೆ. ಬೆಳಿಗ್ಗೆ 8ಕ್ಕೆ ಸಮ್ಮೇಳನ ಆರಂಭವಾಗಿ ರಾತ್ರಿ 8ಕ್ಕೆ ಮುಕ್ತಾಯಗೊಳ್ಳಲಿದೆ. ಮೆರವಣಿಗೆಗೆ ತಹಶೀಲ್ದಾರ್ ಚಾಲನೆ ನೀಡಲಿದ್ದು, ಎನ್.ಎಸ್.ಹೆಗಡೆ ಕೆರೆಕೋಣ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುವುದು. ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಯು.ಭಟ್, ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ, ಕೃಷ್ಣಮೂರ್ತಿ ಭಟ್ಟ ಶಿವಾನಿ, ಅರವಿಂದ ಕರ್ಕಿಕೋಡಿ ಭಾಗವಹಿಸುವರು’ ಎಂದು ಹೇಳಿದರು.

ADVERTISEMENT

‘11.30ಕ್ಕೆ ‘ಹೊನ್ನಾವರ: ಪ್ರಸ್ತುತ’ ವಿಷಯದ ಕುರಿತು ನಡೆಯುವ ಮೊದಲ ಗೋಷ್ಠಿಯಲ್ಲಿ ರಾಜು ಹೆಗಡೆ ಮಾಗೋಡ, ಡಾ.ರಂಗನಾಥ ಕಂಟನಕುಂಟೆ, ಶ್ರೀನಿವಾಸ ನಾಯ್ಕ ಮಾಡಗೇರಿ ಭಾಗವಹಿಸುವರು. ಸುರೇಶ ತಾಂಡೇಲ ‘ಹೊನ್ನಾವರ: ವಿದ್ಯಾರ್ಥಿ ಸಿರಿ’ ಕುರಿತ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ‘ಸಮ್ಮೇಳನಾಧ್ಯಕ್ಷರ ಸಾಹಿತ್ಯ– ಸಮಾಹಿತ’ ಕುರಿತ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹೆಬ್ಬಾರ, ಎಂ.ಎಸ್.ಹೆಗಡೆ, ಸುಧಾ ಭಂಡಾರಿ ವಿಷಯ ಮಂಡಿಸುವರು. ಸಂಜೆ 3.30ಕ್ಕೆ ‘ಕವಿ ಸಮಯ’ ಗೋಷ್ಠಿ ನಡೆಯಲಿದ್ದು, ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅಧ್ಯಕ್ಷತೆ ವಹಿಸುವರು. ಕವಿಗಳಿಂದ ಕಾವ್ಯ ವಾಚನ ನಡೆಯುವುದು’ ಎಂದು ತಿಳಿಸಿದರು.

‘ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿ.ಗಣಪತಿ ಸಮಾರೋಪ ನುಡಿಗಳನ್ನಾಡಲಿದ,್ದು ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸುವರು. ಡಾ.ಎನ್.ಆರ್.ನಾಯಕ, ಡಾ.ಶ್ರೀಪಾದ ಶೆಟ್ಟಿ, ಡಾ.ಆಶಿಕ್ ಹೆಗ್ಡೆ ಮತ್ತಿತರರು ಭಾಗವಹಿಸುವರು. ಡಾ.ಜಿ.ಎಸ್.ಭಟ್ಟ ಸಾಗರ, ಕೃಷ್ಣ ಯಾಜಿ ಬಳ್ಕೂರು, ಶಿವಾನಂದ ಹೆಗಡೆ ಕೆರೆಮನೆ, ದಾಮೋದರ ನಾಯ್ಕ ಉಂಚಗೇರಿ, ಡಾ.ಲಕ್ಷ್ಮೀಶ ಭಟ್ಟ, ಎನ್.ಎಸ್.ನಾಯ್ಕ, ನಿತ್ಯಾನಂದ ಭಟ್, ಕೃಷ್ಣ ಗೌಡ, ಬಾಲಕೃಷ್ಣ ಪೈ ಅವರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಲಿದ್ದು, ಪ್ರಶಾಂತ ಮೂಡಲಮನೆ ಅಭಿನಂದಿಸುವರು. ರಾತ್ರಿ 6.30ರಿಂದ ‘ಭಾವಸಂಗಮ’ ಮನರಂಜನಾ ಕಾರ್ಯಕ್ರಮ ನಡೆಯುವುದು’ ಎಂದು ತಿಳಿಸಿದರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, ಕಾರ್ಯಾಧ್ಯಕ್ಷ ಡಿ.ಡಿ.ಮಡಿವಾಳ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ದುರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.