ADVERTISEMENT

‘ಬಸವಣ್ಣನಿಗೆ ದೀಕ್ಷೆ ಕೊಟ್ಟವರು ಕುರುಬರು’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:45 IST
Last Updated 2 ಡಿಸೆಂಬರ್ 2013, 8:45 IST

ಶಿರಸಿ: ‘ವೀರಶೈವ ಸಮುದಾಯದ ಜಗಜ್ಯೋತಿ ಬಸವಣ್ಣನವರಿಗೆ ಲಿಂಗದೀಕ್ಷೆ ನೀಡಿದ ರೇವಣ ಸಿದ್ದರು ಕುರುಬ ಸಮಾಜದವರಾಗಿದ್ದರು. ಇಂತಹ ಪುರಾತನ ಇತಿಹಾಸ ಹೊಂದಿರುವ ಕುರುಬ ಸಮಾಜ ಇಂದು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ’ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕು ಕುರುಬರ ಸಂಘದ ಭಕ್ತ ಕನಕದಾಸ ಸೇವಾ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.

‘ವೀರಶೈವ ಸಮುದಾಯವು ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ವೀರಶೈವ ಸಮಾಜದ ಬಸವಣ್ಣನವರಿಗೆ ಲಿಂಗದೀಕ್ಷೆ ನೀಡಿದ್ದು ಕುರುಬ ಸಮಾಜದ ರೇವಣಸಿದ್ದರು. ಇಂಥ ವಿಶೇಷತೆ ಹೊಂದಿರುವ ಕುರುಬ ಸಮುದಾಯವು ಮೌಢ್ಯ ಹಾಗೂ ಅಜ್ಞಾನದಿಂದ ಹಿಂದಿನ ಇತಿಹಾಸವನ್ನು ಮರೆಯುತ್ತಿದೆ. ಕುರುಬ ಸಮುದಾಯದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾಗಿದೆ. ಪ್ರತಿ ವ್ಯಕ್ತಿ ತನ್ನ ಸಮುದಾಯ ಇತಿಹಾಸವನ್ನು ಅರಿಯದಿದ್ದರೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗದು’ ಎಂದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಭಾರತೀಯ ಸಂಸ್ಕೃತಿಗೆ ಬೆಳಗಲು ಎಲ್ಲ ಹಿಂದುಗಳು ಸಂಘಟಿತರಾಗಬೇಕು. ಸಂಘಟನೆಯಿಂದ ಮಾತ್ರ ಹಿಂದು ಧರ್ಮ ಉನ್ನತಿಗೆ ತಲುಪುತ್ತದೆ’ ಎಂದರು.

ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಬೇಕು ಎಂದು ಒತ್ತಾಯಿಸ ಲಾಯಿತು.

ಸಂಘಟನೆ ಅಧ್ಯಕ್ಷ ಮಹಾಂತೇಶ ಹಾದಿಮನಿ, ಪದಾಧಿಕಾರಿಗಳಾದ ಡಿ.ಬಂಗಾರಪ್ಪ, ರಮೇಶ ಕಬ್ಬೂರ್, ಬಸಪ್ಪ ದೇವರಿ, ಜಯಪ್ಪ ತಿಪ್ಪನವರ್‌, ಚಂದ್ರಶೇಖರ ಲಿಂಗಪ್ಪ, ಮಂಜುನಾಥ ಉಪಸ್ಥಿತರಿದ್ದರು.

ಮಾಲತೇಶ ಹೆಬ್ಬಾಳ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಪೂರ್ವ ನಡೆದ ಕನಕದಾಸರ ಭಾವಚಿತ್ರ ಸಹಿತ ಮೆರವಣಿಗೆಗೆ ಸಂಸದ ಅನಂತಕುಮಾರ್‌ ಹೆಗಡೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.