ADVERTISEMENT

25ರಿಂದ ಚಲನಚಿತ್ರೋತ್ಸವ-11

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 6:35 IST
Last Updated 20 ಸೆಪ್ಟೆಂಬರ್ 2011, 6:35 IST

ಸಿದ್ದಾಪುರ:  ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಲನಚಿತ್ರಗಳ ಪ್ರದರ್ಶನದ `ಚಲನಚಿತ್ರೋತ್ಸವ- 2011~ ಕಾರ್ಯಕ್ರಮವು ಸ್ಥಳೀಯ ಶಂಕರಮಠದಲ್ಲಿ ಇದೇ 25ರಿಂದ ಅ.1ರವರೆಗೆ ನಡೆಯಲಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದರು.

ಸೋಮವಾರ ಪಟ್ಟಣದ ಶಂಕರಮಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಂಕರಮಠದಲ್ಲಿ ನಡೆಯುವ ಶರನ್ನವರಾತ್ರಿಯ ಅಂಗವಾಗಿ ಈ ಚಲನಚಿತ್ರೋತ್ಸವ ನಡೆಯಲಿದೆ ಎಂದರು.

ಪಟ್ಟಣದ ಶೃಂಗೇರಿ ಶಂಕರಮಠವು ನವರಾತ್ರಿಯ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸುತ್ತಿದೆ. ಕಳೆದ ವರ್ಷ ರಾಜ್ಯಮಟ್ಟದ ಸಂಗೀತ ಮಹೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿತ್ತು.

ಈ ಸಾರಿ ಇದಕ್ಕಿಂತ ಭಿನ್ನವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದೇವೆ ಎಂದರು. ಈ ಚಲನಚಿತ್ರೋತ್ಸವದ ಸಂದರ್ಭದಲ್ಲಿ ನಿತ್ಯ ಸಂಜೆ 7ಕ್ಕೆ ಸಿನಿಮಾ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಾಗಿರುತ್ತದೆ. ಸೆ. 25ರಿಂದ ಕ್ರಮವಾಗಿ ದ್ವೀಪ. ತಾಯಿ ಸಾಹೇಬ, ಘಟಶ್ರಾದ್ಧ, ಗುಲಾಬಿ ಟಾಕೀಸ್, ನಾಯಿನೆರಳು, ಕನಸೊಂದು ಕುದುರೆಯೇರಿ,ತಬರನ ಕಥೆ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶನಕ್ಕೆ ಮೊದಲು ಕಾಫಿಬೈಟ್ ತಂಡದವರಿಂದ ತುಣುಕು ಚಿತ್ರಗಳ ಪ್ರದರ್ಶನವಿದೆ ಎಂದರು.

 ಉದ್ಘಾಟನೆ, ಸಂವಾದ: ಇದೇ 25ರಂದು ಸಂಜೆ 6ಕ್ಕೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಯತಿಕುಮಾರ್ ಚಲನಚಿತ್ರೋತ್ಸವವನ್ನು ಉದ್ಘಾಟಿಸುವರು. ಸಾಹಿತಿ ನಾ.ಡಿಸೋಜ ಉಪಸ್ಥಿತರಿರುವರು. ಅ. 1ರಂದು ಸಂಜೆ 4ಕ್ಕೆ ಸಂವಾದ ಕಾರ್ಯಕ್ರಮವಿದ್ದು, ಗಿರೀಶ್ ಕಾಸರವಳ್ಳಿ, ಪ್ರೊ .ಎಂ.ಎನ್. ನಾಗರಾಜರಾವ್ ಮತ್ತು ಶ್ರೀಧರ ಬಳಗಾರ ಉಪಸ್ಥಿತರಿರುವರು.
 
ಗಿರೀಶ್ ಕಾಸರವಳ್ಳಿ ಅವರೊಡನೆ ಅವರ ಚಿತ್ರಗಳ ಕುರಿತು ಆಸಕ್ತರು ಈ ಸಂದರ್ಭದಲ್ಲಿ ಸಂವಾದ ನಡೆಸಬಹುದಾಗಿದೆ ಎಂದರು.

ಶೃಂಗೇರಿ ಶಂಕರಮಠದ ಸಂಸ್ಕೃತಿ ಸಂಪದದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ, ತಾಲ್ಲೂಕಿನ ರಂಗ ಸೌಗಂಧ ಮತ್ತು ಒಡ್ಡೋಲಗ ಸಂಸ್ಥೆಗಳು ಸಹಕಾರ ನೀಡಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.