ಕಾರವಾರ: ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ 33 ವಸತಿನಿಲಯಗಳಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದ್ದು, ಆದಷ್ಟು ಬೇಗನೇ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.
ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 93 ಬಿಸಿಎಂ ಹಾಸ್ಟೆಲ್ಗಳಿದ್ದು, 51 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 42 ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿದ್ದು, 33 ಹಾಸ್ಟೆಲ್ಗಳ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ 16 ನಿವೇಶನಗಳನ್ನು ಅಂತಿಮಗೊಳಿಸಲಾಗಿದ್ದು, ನಿರ್ಮಾಣ ಪ್ರಕ್ರಿಯೆ ಆರಂಭಿಸಬೇಕು. ಇನ್ನೂ 8 ಹೊಸ ಹಾಸ್ಟೆಲ್ಗಳ ಮಂಜೂರು ಆಗಿ ದ್ದು, ಎಲ್ಲಾ ಹಾಸ್ಟೆಲ್ಗಳಲ್ಲಿ ಜನರೇಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಪರಿಶಿಷ್ಟ ಜಾತಿ ಪಂಗಡದ 5 ಹೊಸ ಹಾಸ್ಟೆಲ್ಗಳು ಮಂಜೂರಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ನಿವೇಶನ ಗುರುತಿಸಬೇಕು. ಎಲ್ಲಾ ತಾಲ್ಲೂಕುಗಳಲ್ಲಿ, ಹೋಬಳಿಗಳಲ್ಲಿ ಮಾತ್ರವಲ್ಲದೆ ಇತರೆ 18 ಕಡೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ನಿವೇಶನ ಗಳನ್ನು ಗುರುತಿಸಬೇಕು ಎಂದರು.
ಅತಿಕ್ರಮಣದಾರರ ಅರ್ಜಿಗಳು: ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 91,200 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ ಪರಿಶಿಷ್ಟ ಪಂಗಡದ ಎಲ್ಲಾ 3,374 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1,367 ಅರ್ಜಿಗಳನ್ನು ತಿರಸ್ಕರಿಸಿ 1,454 ಅರ್ಜಿಗಳನ್ನು ಪುರಸ್ಕರಿಸಿ ಪಟ್ಟಾ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸಮುದಾಯ ಹಕ್ಕು ಅಡಿ 3,190 ಅರ್ಜಿ ಸ್ವೀಕರಿಸಲಾಗಿದ್ದು, 912 ತಿರಸ್ಕರಿಸ ಲಾಗಿದೆ. ಒಟ್ಟು 860 ಪ್ರಕರಣಗಳಲ್ಲಿ ಪಟ್ಟಾ ಒದಗಿಸಲು ಅಂತಿಮಗೊಳಿಸ ಲಾಗಿದೆ. ಅರಣ್ಯ ಹಕ್ಕು ಕಾಯ್ದೆ ಜಾರಿಯ ಲ್ಲಿರುವ ತೊಡಕುಗಳನ್ನು ನಿವಾರಿಸಲು ಸರ್ಕಾರಿ ಆದೇಶ ಜಾರಿಗೊಳಿಸಲಾಗು ವುದು. ಆ ಬಳಿಕವಾದರೂ ಅರ್ಜಿ ವಿಲೇವಾರಿ ತ್ವರಿತಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಸಹ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ತ್ವರಿತಗೊಳಿಸಬೇಕು ಎಂದರು.
ಪರಿಹಾರ ಧನ ಹೆಚ್ಚಳ: ಮೀನುಗಾರಿಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುವ ಮೀನುಗಾರ ರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ₹ 2 ಲಕ್ಷದಿಂದ ₹ 5ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಮೀನುಗಾರ ರಿಗೆ 67 ಮನೆಗಳು ಮಂಜೂರಾಗಿವೆ. ಎಲ್ಲಾ ಮೀನುಗಾರರಿಗೆ ಲೈಫ್ ಜಾಕೆಟ್ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಎ.ಜಿ ಸ್ಪಷ್ಟಿಕರಣಕ್ಕೆ ನಿರ್ಧಾರ: ಜಿಲ್ಲೆಯಲ್ಲಿರುವ ಮೊಗೇರ ಸಮುದಾ ಯದ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಇರುವ ಗೊಂದಲ ನಿವಾರಣೆಗೆ ಅಡ್ವೋಕೇಟ್ ಜನರಲ್ ಅವರಿಂದ ಸ್ಪಷ್ಟೀಕರಣ ಪಡೆಯಬೇಕು. ಅವರ ಅಭಿಪ್ರಾಯ ಪಡೆದು ಈ ನಿಟ್ಟಿನಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ, ಶಿವರಾಮ ಹೆಬ್ಬಾರ್, ಘೋಟ್ನೇಕರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.