ಅಂಕೋಲಾ: 'ಸಮಾಜದಲ್ಲಿ ವಿಭಿನ್ನ ಚಟುವಟಿಕೆಗಳು ನಡೆಯುತ್ತಿದ್ದರೆ ಯುವ ಜನಾಂಗ ಸದಾ ಕ್ರಿಯಾಶೀಲರಾಗಿರುತ್ತದೆ. ಯುವಕರು ಕ್ರಿಯಾಶೀಲವಾಗಿದ್ದರೆ ಗ್ರಾಮ ಅಭಿವೃದ್ಧಿಯಾಗುತ್ತದೆ’ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಭಿಪ್ರಾಯಪಟ್ಟರು.
ರಾಜಮುರಳಿ ಗೆಳೆಯರ ಬಳಗ, ಬೊಬ್ರದೇವ ಯುವಕ ಮಂಡಳ, ಶ್ರೀರಾಮ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿ ನಡೆದ ಕೃಷ್ಣೋತ್ಸವದಲ್ಲಿ ಸಾಧಕರಿಗೆ ಸನ್ಮಾನಿಸಿ ಅವರು ಮಾತನಾಡಿದರು. ‘ಹಿರಿಯರು ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ, ಸಲಹೆ– ಸೂಚನೆಗಳನ್ನು ನೀಡುತ್ತಿರಬೇಕು. ಒಗ್ಗಟ್ಟಾಗಿ ದುಡಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ' ಎಂದರು.
ಸನ್ಮಾನ: ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ನಾಗಪತಿ ಹೆಗಡೆ, ಸ್ಥಳ ದಾನ ಮಾಡಿದ ಸವಿತಾ ಮತ್ತು ರಾಮಚಂದ್ರ ಶೆಟ್ಟಿ, ಉತ್ತಮ ಮೂರ್ತಿ ಕಲಾಕಾರ ದಿನೇಶ ಮೇತ್ರಿ, ಸಮಾಜಸೇವೆಗಾಗಿ ಸುಭಾಷ್ ಕಾರೇಬೈಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಟಿ ವೈದ್ಯ ಹನುಮಂತ ಗೌಡ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಸಂದೀಪ ಬಂಟ, ಶಿಕ್ಷಕ ಬಾಲಚಂದ್ರ ನಾಯಕ, ಗ್ರಾಮ ಪಂಚಾಯ್ತಿ ಸದಸ್ಯರಾದ ದೇವಿದಾಸ ನಾಯ್ಕ, ಗಿರಿಜಾ ನಾಯ್ಕ, ಸಾಯಿಬಾಬಾ ಸೌಹಾರ್ದದ ಅಧ್ಯಕ್ಷ ಶ್ರೀಕಾಂತ ನಾಯ್ಕ, ರಾಘು ನಾಯ್ಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.