ADVERTISEMENT

ಭೇಟಿಗೆ ಹೆಗಡೆ ಅವಕಾಶ ಕೊಟ್ಟಿಲ್ಲ: ಅಸ್ನೋಟಿಕರ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 7:03 IST
Last Updated 5 ಜನವರಿ 2018, 7:03 IST

ಕಾರವಾರ: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭೇಟಿಗೆ ಮೂರು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿಲ್ಲ. ಭೇಟಿಗೆ ಅವರೂ ಅವಕಾಶವೂ ಕೊಟ್ಟಿಲ್ಲ’ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಗುರುವಾರ ಇಲ್ಲಿ ಹೇಳಿದರು.

‘ನಾನು ಬಿಜೆಪಿ ನಾಯಕರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸುವ ಕುರಿತು ವಿವರಿಸಿದ್ದೆ. ಅದಕ್ಕೆ ಅವರು ಸ್ಥಳೀಯ ನಾಯಕರನ್ನು ಒಪ್ಪಿಸಿ ಎನ್ನುವ ಸಲಹೆ ನೀಡಿದ್ದರು. ಆ ಪ್ರಕಾರ ಹೆಗಡೆ ಅವರನ್ನು ಭೇಟಿ ಮಾಡಲು ಮೂರು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದೇನೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಯಾರ ಕಾಲು ಹಿಡಿದು ರಾಜಕೀಯ ಮಾಡಿದವನಲ್ಲ. ನಮ್ಮ ಕುಟುಂಬ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿಲ್ಲ’ ಎಂದು ಪರೋಕ್ಷವಾಗಿ ಹೆಗಡೆ ವಿರುದ್ಧ ಅಸ್ನೋಟಿಕರ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮುಂದಿನ ಹತ್ತು ದಿನಗಳಲ್ಲಿ ಯಾವ ಪಕ್ಷಕ್ಕೆ ಸೇರುತ್ತೇನೆ ಎಂಬುದನ್ನು ಪ್ರಕಟಿಸುತ್ತೇನೆ. ಅದಕ್ಕೂ ಮೊದಲು ಎಲ್ಲ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಭೇಟಿ ಮಾಡಲು ಶುಕ್ರವಾರ ಬೆಂಗಳೂರಿಗೆ ತೆರಳುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.