ಅಂಕೋಲಾ: ಇಲ್ಲಿನ ಮಂಜಗುಣಿ ದಕ್ಕೆಯಲ್ಲಿ ನಿಲ್ಲಿಸಿಡಲಾಗಿದ್ದ ಬಾರ್ಜ್ ನೀರಿನ ಉಬ್ಬರಕ್ಕೆ ಮೇಲ್ಮುಖವಾಗಿ ಚಲಿಸಿ ಬಧವಾರ ದಕ್ಕೆಯ ಮೇಲೇರಿದ್ದು, ನೀರಿನ ಇಳಿತದ ಸಂದರ್ಭದಲ್ಲಿಯೂ ಅದು ಕೆಳಗಿಳಿದು ಚಲಿಸಲು ಸಾಧ್ಯವಾಗದೇ ಗುರುವಾರ ಮಧ್ಯಾಹ್ನದವರೆಗೆ ಸಂಚಾರಕ್ಕೆ ತೊಡಕುಂಟಾಯಿತು.
ಬೆಳಿಗ್ಗೆ 6ರಿಂದ ಬಾರ್ಜ್ ಅನ್ನು ಬಿಡಲಾಗುತ್ತಿತ್ತು. ಆದರೆ ಅದರ ಸಂಚಾರ ಸ್ಥಗಿತಗೊಂಡಿದ್ದರಿಂದ ಪಟ್ಟಣಕ್ಕೆ ಆಗಮಿಸಲು ಬರುವ ಶಾಲಾ– ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟಿಗೆ ಆಗಮಿಸುವವರು ಪರಿತಪಿಸುವಂತಾಯಿತು. ಆದರೆ ಕೆಲವರು ಚಿಕ್ಕ ದೋಣಿಗಳಲ್ಲಿಯೇ ಸಂಚರಿಸಿದರು. ಗುರುವಾರ ಮಧ್ಯಾಹ್ನ ನೀರಿನ ಉಬ್ಬರದ ವೇಳೆ ಅದನ್ನು ಯಥಾಸ್ಥಿತಿಗೆ ತರಲು ಸಿಬ್ಬಂದಿ ಪ್ರಯತ್ನಿಸಿ ಯಶಸ್ವಿಯಾದ ಬಳಿಕ ಬಾರ್ಜ್ ಮತ್ತೆ ಸಂಚಾರ ಆರಂಭಿಸಿತು.
‘ಬಂದರು ಇಲಾಖೆಯವರ ಅವೈಜ್ಞಾನಿಕ ಕಾಮಗಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯವೇ ಪದೇ ಪದೇ ಇಂಥ ಘಟನೆ ಮರುಕಳಿಸಲು ಕಾರಣವಾಗಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕ ಡಿಂಗಿಯೇ ಇದ್ದರೆ ಇಂತಹ ಪರದಾಟ ಇರುತ್ತಿರಲಿಲ್ಲ. ಇಲಾಖೆಯವರು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು.
ಜನರಿಗೆ ಮತ್ತೆ ತೊಂದರೆ ಉಂಟಾದಲ್ಲಿ ಅಥವಾ ಯಾವುದಾದರು ಪ್ರಾಣಹಾನಿ ಸಂಭವಿಸಿದಲ್ಲಿ ಇಲಾಖೆಯೇ ಜವಾಬ್ದಾರಿ ಹೊರಬೇಕಾಗುತ್ತದೆ’ ಎಂದು ಮಂಜಗುಣಿಯ ನಿವಾಸಿ ಶ್ರೀಪಾದ ನಾಯ್ಕ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.