ಹೊನ್ನಾವರ: ‘ಅನ್ನ, ಅಕ್ಷರ, ಆರೋಗ್ಯ ಹಾಗೂ ಶುದ್ಧ ಆಚರಣೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವಶ್ಯ’ ಎಂದು ಬೈಫ್ ಸಂಸ್ಥೆ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ.ನಾರಾಯಣ ಹೆಗಡೆ ಮಾದಪ್ಪನ್ ಅಭಿಪ್ರಾಯ ಪಟ್ಟರು.
ಇಲ್ಲಿನ ಎಂಪಿಇ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಹಾಗೂ ಎಸ್.ಡಿ.ಎಂ ಕಾಲೇಜಿನ ಇಕೋ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಾರತದಲ್ಲಿ ಶೇ 30ರಷ್ಟು ಕುಟುಂಬ ಹಳ್ಳಿಯಲ್ಲಿವೆ. ಅಲ್ಲಿ ಲಿಂಗ ತಾರತಮ್ಯ ಹೆಚ್ಚುತ್ತಿದೆ. ಇಂಥ ತಾರತಮ್ಯ ಹಾಗೂ ಬಡತನ ನಿವಾರಣೆಗೆ ಯುವಕರು ಪ್ರಯತ್ನಿಸಬೇಕು. ಜೀವ ವಿಕಾಸದ ಕೊನೆಯಲ್ಲಿ ಬಂದ ಮನುಷ್ಯನ ವೈಚಾರಿಕ ಕ್ರಾಂತಿ ಬೆರಗು ಹುಟ್ಟಿಸುತ್ತದೆಯಾದರೂ ತೀರ ಲೌಕಿಕ ಬದುಕಿಗೆ ತೆರೆದಿರುವ ಇವರಲ್ಲಿ ಸಮಾಧಾನ ಕಂಡುಬರುತ್ತಿಲ್ಲ.
ನಮ್ಮ ಆಸೆ, ಭಾವನೆ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು’ ಎಂದರು. ಸಂಸ್ಥೆ ಮೂಲಕ ₹ 80 ಸಾವಿರ ಹಳ್ಳಿಗಳಲ್ಲಿ ಹಾಲಿನ ಕ್ರಾಂತಿ ಮಾಡಿದ ಸಾಹಸ ಗಾಥೆಯನ್ನು ಅವರು ನೆನಪಿಸಿಕೊಂಡರು. ಪ್ರಾಂಶುಪಾಲ ಡಾ.ಎಸ್.ಎಸ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಬಯೋ ಕ್ಲಬ್ನ ಪ್ರತಿನಿಧಿ ಕಿಶನ್ ಉಪಸ್ಥಿತರಿದ್ದರು. ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಟೂಟ್ನ ಸಂಯೋಜಕ ಡಾ.ಶಿವರಾಮ ಶಾಸ್ತ್ರಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.