ದಾಂಡೇಲಿ: ಜೊಯಿಡಾದ ಒಂದಿಂಚು ಜಾಗವನ್ನೂ ದಾಂಡೇಲಿ ತಾಲ್ಲೂಕಿಗೆ ಬಿಟ್ಟುಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ದಾಂಡೇಲಿ-ಜೊಯಿಡಾದ ಜನ ಸಹೋದರರಂತೆ ಬಾಳುತ್ತಿದ್ದು, ಅನವಶ್ಯಕ ಹೇಳಿಕೆಗಳ ಮೂಲಕ ಯಾವುದೇ ಗೊಂದಲ ಸೃಷ್ಟಿಸದಿರಿ ಎಂದು ದಾಂಡೇಲಿ ಬಿಜೆಪಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಮನವಿ ಮಾಡಿದರು.
ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಂಡೇಲಿ ತಾಲ್ಲೂಕಾಗಿರುವುದನ್ನು ಜೊಯಿಡಾ ಜನರೂ ಸ್ವಾಗತಿಸುದ್ದಾರೆ. ಇನ್ನು ಮುಂದೆ ಅದರ ಅನುಷ್ಠಾನ ಮತ್ತು ಗಡಿ ಗುರುತಿಸುವಿಕೆಯನ್ನು ಸರ್ಕಾರ ನೋಡಿಕೊಳ್ಳುತ್ತದೆ. ಜೊಯಿಡಾ ತಾಲ್ಲೂಕಿಗೂ ಯಾವುದೇ ಬಾಧಕವಾಗದ ರೀತಿಯಲ್ಲಿ ದಾಂಡೇಲಿ ತಾಲ್ಲೂಕಾಗುತ್ತದೆ ಎಂಬ ಭರವಸೆ ನಮಗಿದೆ ಎಂದರು.
ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ, ದಾಂಡೇಲಿಯ ವಕ್ತಾರ ರೋಶನ್ ನೇತ್ರಾವಳಿ ಮಾತನಾಡಿ, ಕಳೆದ ಚುನಾವಣೆ ಸಂದರ್ಭದಲ್ಲಿ ಹಳಿಯಾಳ ಜೋಯಿಡಾ ಕ್ಷೇತ್ರದ ಹಾಗೂ ದಾಂಡೇಲಿ ನಗರದ ಅಭಿವೃದ್ಧಿ ಕುರಿತಂತೆ ಸಚಿವ ಆರ್.ವಿ. ದೇಶಪಾಂಡೆಯವರು ನೀಡಿದ್ದ ಪ್ರಣಾಳಿಕೆಯ ಭರವಸೆಗಳು ಶೇ 90ರಷ್ಟು ಈಡೇರಿಲ್ಲ. ಹಾಗಾಗಿ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ವಿರುದ್ಧ ಅರೋಪ ಪಟ್ಟಿ ಸಿದ್ಧಪಡಿಸಿ ಚುನಾವಣೆಯ ವೇಳೆ ಅದನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.
ಬಿಜೆಪಿ ಕಾರ್ಯದರ್ಶಿಗಳಾದ ನರೇಂದ್ರ ಚೌಹಾಣ, ಸುಭಾಶ ಅರವೇಕರ, ಯುವ ಮೋರ್ಚಾ ಅಧ್ಯಕ್ಷ ಮಂಜು ಪಾಟೀಲ, ಮಹಿಳಾ ಮೋರ್ಚಾ ಅಧ್ಯಕ್ಷೆ ದೇವಕ್ಕಾ ಕೆರೆಮನಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಪ್ರಮುಖರಾದ ರವೀಂದ್ರ ಷಾ, ವಿಷ್ಣು ವಾಜ್ವೆ, ಸಂಜಯ ಜಾಧವ್, ಬುದವಂತ, ರಾಜಶೇಖರ ಬೆಳ್ಳಿಗಟ್ಟಿ, ಮಾರುತಿ ಡೊಂಬರ, ಚಿದಾನಂದ ಕಲಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.