ADVERTISEMENT

‘ತಾಲ್ಲೂಕು ಮಟ್ಟದ ಯುವಜನ ಮೇಳ ಮುಂದುವರಿಯಲಿ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:42 IST
Last Updated 26 ಜನವರಿ 2018, 11:42 IST

ಸಿದ್ದಾಪುರ: ‘ತಾಲ್ಲೂಕು ಮತ್ತು ವಿಭಾಗ ಮಟ್ಟದ ಯುವಜನ ಮೇಳ ನಡೆಸುವ ಪದ್ಧತಿ ಮುಂದುವರಿಯಬೇಕು’ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನಾಗರಾಜ ನಾಯ್ಕ ಮಾಳ್ಕೋಡ ಆಗ್ರಹಿಸಿದರು.

‘ಈ ವರ್ಷ ತಾಲ್ಲೂಕು ಮಟ್ಟದ ಹಾಗೂ ವಿಭಾಗ ಮಟ್ಟದ ಯುವಜನ ಮೇಳವನ್ನು ರದ್ದುಪಡಿಸಿದ ಸರ್ಕಾರ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯುವಜನ ಮೇಳವನ್ನು ಮಾತ್ರ ನಡೆಸಲು ನಿರ್ದೇಶನ ನೀಡಿದೆ. ತಾಲ್ಲೂಕು ಮಟ್ಟದ ಯುವಜನ ಮೇಳವನ್ನು ರದ್ದು ಮಾಡಲು ಅಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಎಂಬ ಕಾರಣವನ್ನು ಇಲಾಖೆ ನೀಡಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯುವಜನ ಮೇಳದಲ್ಲಿ ಭಾಗಿಯಾಗುವವರಿಗೆ ಕೇವಲ ಪಾರಿತೋಷಕ ನೀಡಲಾಗುತ್ತದೆ. ಆ ಪಾರಿತೋಷಕದೊಂದಿಗೆ, ನಗದು ಬಹುಮಾನವನ್ನೂ ನೀಡಬೇಕು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅನುದಾನದಲ್ಲಿ ಶೇ 2ರಷ್ಟು ಹಣವನ್ನು ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅವಕಾಶವಿದ್ದು, ಈ ಹಣವನ್ನು ಉಪಯೋಗಿಸಿಕೊಳ್ಳಬೇಕು. ಈ ಮೂಲಕ ತಾಲ್ಲೂಕು ಯುವಜನ ಮೇಳದ ನ್ಯೂನತೆಯನ್ನು ಸರಿಪಡಿಸಲು ಯುವಜನ ಹಾಗೂ ಕ್ರೀಡಾ ಇಲಾಖೆ ಪ್ರಯತ್ನ ಮಾಡಬೇಕು’ ಎಂದರು.

ADVERTISEMENT

ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶಿರಳಗಿ, ಪದಾಧಿಕಾರಿಗಳಾದ ದಯಾನಂದ ಕಡಕೇರಿ, ಎಂ.ಜಿ.ನಾಯ್ಕ ನರಮುಂಡಿಗೆ, ಶಂಕರ ಮೂರ್ತಿ ನಾಯ್ಕ ಅವರಗುಪ್ಪ ಮತ್ತು ಪ್ರಶಾಂತ್ ಶೇಟ್, ಸುರೇಶ ಕಡಕೇರಿ ಗೋಷ್ಠಿಯಲ್ಲಿದ್ದರು.

**

ಕರಾವಳಿ ಅಥವಾ ಕದಂಬೋತ್ಸವದಂತಹ ಉತ್ಸವಗಳಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಆಯ್ಕೆ ಆದವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಬೇಕು
-ನಾಗರಾಜ ನಾಯ್ಕ ಮಾಳ್ಕೋಡ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.