ADVERTISEMENT

6 ಲಕ್ಷ ಮೌಲ್ಯದ ಅಕ್ರಮ ಕಟ್ಟಿಗೆ ವಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:35 IST
Last Updated 17 ಜೂನ್ 2011, 10:35 IST

ಭಟ್ಕಳ: ತಾಲ್ಲೂಕಿನ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಡಿದು ಅಕ್ರಮವಾಗಿ ತಾಲ್ಲೂಕಿನ ವೆಂಕಟಾಪುರದ ಸಾಲೆಮನೆಯಲ್ಲಿ  ಬಚ್ಚಿಟ್ಟಿದ್ದ ಸುಮಾರು ರೂ. 6 ಲಕ್ಷ ಮೌಲ್ಯದ ಅಕ್ರಮ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಅರಣ್ಯಾಧಿಕಾರಿಗಳು ಪೊಲೀಸರ ನೆರವಿನಿಂದ ದಾಳಿ ನಡೆಸಿ ಬೀಟೆ, ಸಾಗವಾನಿ, ನಂದಿ, ಮತ್ತಿ ಮುಂತಾದ ಕಟ್ಟಿಗೆಗಳನ್ನು ಅದನ್ನು ಸಾಗಿಸಲು ಬಳಸುತ್ತಿದ್ದ ವಾಹನ ಮತ್ತು ಕಟ್ಟಿಂಗ್ ಯಂತ್ರಗಳನ್ನು ಗುರುವಾರ ವಶಪಡಿಸಿಕೊಂಡರು.

ತಾಲ್ಲೂಕಿನ ಹೆಗ್ಗದ್ದೆ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯವರು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಬೆಳೆಬಾಳುವ ಮರಗಳನ್ನು ಕಡಿದಿರು ವುದು ಬೆಳಕಿಗೆ ಬಂತು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಶಿರಾಲಿ ವೆಂಕಟಾಪುರದ ಸಾಲೆಮನೆಯ ಕೃಷ್ಣಮೂರ್ತಿ ಭಟ್ ಎಂಬವರ ಮನೆಯಲ್ಲಿ ಬಚ್ಚಿಟ್ಟಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಕಿ ವಲಯ ಅರಣ್ಯಾಧಿಕಾರಿ ಮಂಜುನಾಥ ಜಿ.ನಾವಿ, ಡಿ.ಎಫ್.ಓ ಕೃಷ್ಣ ಉದುಪುಡಿ ಮಾರ್ಗದರ್ಶನದಲ್ಲಿ ಗುರುವಾರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮನೆಯ ಅಂಗಳದಲ್ಲಿದ್ದ ಎರಡು ಕೋಣೆಯ ಬೀಗ ಒಡೆದು ಅದರಲ್ಲಿದ್ದ ಸುಮಾರು ರೂ. 4ಲಕ್ಷ ಮೌಲ್ಯದ ಸಾಗವಾನಿ ಮತ್ತು ರೂ. 2ಲಕ್ಷ ಮೌಲ್ಯದ ಬೀಟೆ, ನಂದಿ, ಕೆಂದಳ ಸೇರಿದಂತೆ ವಿವಿಧ ಜಾತಿಯ ಬೆಲೆಬಾಳುವ ಮರಗಳನ್ನು ವಶಕ್ಕೆ ತೆಗೆದುಕೊಂಡರು.

ಮನೆಗೆ ಸಮೀಪದಲ್ಲೇ ಮರಗಳನ್ನು ಕಟ್ಟಿಂಗ್ ಮಾಡಲು ಯಾವುದೇ ಪರವಾನಗಿಯಿಲ್ಲದೇ ಅನಧಿಕೃತವಾಗಿ ಬಳಸುತ್ತಿದ್ದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಬೆಂಡ್ ಮಷಿನ್ ಮತ್ತು ಅಕ್ರಮವಾಗಿ ಕಟ್ಟಿಗೆಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದ ಸುಮಾರು ರೂ. 2ಲಕ್ಷ ಮೌಲ್ಯದ ಟಾಟಾ ಸಫಾರಿ ವಾಹನವನ್ನೂ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆರೋಪಿ ಕೃಷ್ಣಮೂರ್ತಿ ಭಟ್ ಪರಾರಿ ಯಾಗಿದ್ದಾರೆ. ದಾಳಿಯಲ್ಲಿ ಎಸ್‌ಐ ಶ್ರೀಕಾಂತ ಸಾಗೇಕರ್, ಎ.ಎಸ್‌ಐ ವಿ.ಡಿ. ಗಾಂವಕರ್, ಇಲಾಖೆಯ ಸಿಬ್ಬಂದಿ ಯಾದ ಭಜಂತ್ರಿ, ಮಾದೇವ, ಸುರೇಶ, ಪ್ರಶಾಂತ ಪಟಗಾರ್, ಎಸ್.ಪಿ. ಕಾಮತ್, ನಾಗೇಶ, ಗಣಪತಿ ,ವಾಹನ ಚಾಲಕ ಪಿ.ಶೇಷು ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.