ADVERTISEMENT

ಶಿರಸಿ | ಮಾರಿಕಾಂಬ ಜಾತ್ರೆಗೆ ಹೆಚ್ಚುವರಿ ಬಸ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:30 IST
Last Updated 20 ಫೆಬ್ರುವರಿ 2020, 20:30 IST
ಶಿರಸಿ ಮಾರಿಕಾಂಬಾ ದೇವಿ ಜಾತ್ರೆ
ಶಿರಸಿ ಮಾರಿಕಾಂಬಾ ದೇವಿ ಜಾತ್ರೆ   

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರಾ ನಿಮಿತ್ತ ಮಾ.3ರಿಂದ ಮಾ.11ರವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷವಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮಾ.1ರಿಂದ ತಾತ್ಕಾಲಿಕವಾಗಿ ಸಾರಿಗೆ ವ್ಯವಸ್ಥೆಯನ್ನು ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದ್ದಾರೆ.

ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ, ಕಾರವಾರ ಮತ್ತು ಪ್ರಮುಖ ಊರುಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯ ದಿನಗಳಲ್ಲಿ ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಬಸ್‌ಗಳನ್ನು ಹೊಸ ಬಸ್ ನಿಲ್ದಾಣದಿಂದ-ಅಶ್ವಿನಿ ಸರ್ಕಲ್- ಎಪಿಎಂಸಿ- ಶಿರಸಿ ಘಟಕ- ವಿವೇಕಾನಂದ ಕ್ರಾಸ್ -ಚಿಪಗಿ ಸರ್ಕಲ್ ಮಾರ್ಗವಾಗಿ, ಬನವಾಸಿ ಮಾರ್ಗದ ಬಸ್‌ಗಳನ್ನು ರಾಮನಬೈಲ್ ಕ್ರಾಸ್‌ನಿಂದ ಹಾಗೂ ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್‌ಗಳನ್ನು ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ, ಐದು ರಸ್ತೆ ಸರ್ಕಲ್ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಶಿರಸಿಯಿಂದ ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗಕ್ಕೆ ಹೋಗುವ ಪ್ರಯಾಣಿಕರು ಇಲ್ಲಿನ ಹೊಸ ಬಸ್ ನಿಲ್ದಾಣ ಅಥವಾ ಹನುಮಾನ ವ್ಯಾಯಾಮ ಶಾಲೆ ಆವರಣದ ಬಸ್ ತಂಗುದಾಣದಿಂದ ಪ್ರಯಾಣಿಸಬಹುದು. ಈ ಭಾಗದಿಂದ ಶಿರಸಿಗೆ ಬರುವ ಪ್ರಯಾಣಿಕರು ರಾಯಪ್ಪ ಹುಲೇಕಲ್ ಶಾಲೆಯ ತಂಗುದಾಣದಲ್ಲಿ ಇಳಿಯಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ ಅಶ್ವಿನಿ ಸರ್ಕಲ್, ರಾಮನಬೈಲ್ ಕ್ರಾಸ್, ಎಪಿಎಂಸಿ ಕ್ರಾಸ್, ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ.

ADVERTISEMENT

ಮಾ.1ರ ಬೆಳಿಗ್ಗೆಯಿಂದ ಹಳೆ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಮತ್ತು ಪಾಸ್ ಕೌಂಟರ್ ಅನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು. ಸಾರಿಗೆ ವ್ಯವಸ್ಥೆಗಳ ಹೆಚ್ಚಿನ ಮಾಹಿತಿಗೆ 7760991725, 7760991702, 08344-229952 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.