ಕಾರವಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಸ್– ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗರಿಷ್ಠ ಖರ್ಚು ಮಾಡಿದ್ದರೆ, ಭಾರತ ಭೂಮಿ ಪಾರ್ಟಿಯ (ಬಿಬಿಪಿ) ಮಂಜುನಾಥ ಸದಾಶಿವ ಅತಿ ಕಡಿಮೆ ವೆಚ್ಚ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಎಲ್ಲ 13 ಅಭ್ಯರ್ಥಿಗಳು ತಮ್ಮ ಚುನಾವಣಾ ಖರ್ಚು– ವೆಚ್ಚಗಳ ಮಾಹಿತಿಯನ್ನು ಸಲ್ಲಿಸಿದ್ದಾರೆ. ಏಪ್ರಿಲ್ 21ರವರೆಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಆನಂದ ಅಸ್ನೋಟಿಕರ್ ಈ ಚುನಾವಣೆಗಾಗಿ ₹ 46,37,245 ವ್ಯಯಿಸಿದ್ದಾರೆ. ಇದರ ಜತೆಗೆ, ಚುನಾವಣಾ ಆಯೋಗದ ಷರತ್ತಿನಂತೆ ನಾಮಪತ್ರ ಸಲ್ಲಿಸಲು ₹ 25 ಸಾವಿರ ಭದ್ರತಾ ಠೇವಣಿಯನ್ನೂ ಇಟ್ಟಿದ್ದು, ಒಟ್ಟು ₹ 46,62,245 ಖರ್ಚಿನ ಮಾಹಿತಿಯನ್ನು ಅವರು ಆಯೋಗಕ್ಕೆ ನೀಡಿದ್ದಾರೆ.
ಮಂಜುನಾಥ ಸದಾಶಿವ ಅವರು, ₹ 25 ಸಾವಿರ ನಾಮಪತ್ರದ ಭದ್ರತಾ ಠೇವಣಿಯನ್ನು ಹೊರತುಪಡಿಸಿ ಕೇವಲ₹ 2 ಸಾವಿರ ಖರ್ಚು ಮಾಡಿರುವುದಾಗಿಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
ನಾಮಪತ್ರ ಭದ್ರತಾ ಠೇವಣಿ ಹೊರತುಪಡಿಸಿ, ಪಕ್ಷೇತರ ಅಭ್ಯರ್ಥಿ ನಾಗರಾಜ ಶಿರಾಲಿ ₹ 94,690, ಚಿದಾನಂದ ಹರಿಜನ ₹ 67,270, ಸುಧಾಕರ ಜೊಗಳೇಕರ್ ₹ 54,818, ಮೊಹಮ್ಮದ್ ಜಬ್ರೂರ್ ಖತೀಬ್ ₹ 30,374, ಅನಿತಾ ಶೇಟ್ ₹ 27,930, ಬಾಲಕೃಷ್ಣ ಪಾಟೀಲ ₹ 18,807, ರಾಷ್ಟ್ರೀಯ ಸಮಾಜ ಪಾರ್ಟಿಯ ನಾಗರಾಜ ನಾಯ್ಕ ₹ 16,500, ರಾಷ್ಟ್ರೀಯ ಜನಸಂಭವನಾ ಪಾರ್ಟಿಯ ನಾಗರಾಜ ಶೇಟ್ ₹ 12,191, ಕುಂದಾಬಾಯಿ ಪರುಳೇಕರ್ ₹ 9,363 ಹಾಗೂ ಉತ್ತಮ ಪ್ರಜಾಕೀಯ ಪಾರ್ಟಿಯ ಸುನೀಲ್ ಪವಾರ್ ₹ 6,500 ಖರ್ಚನ್ನು ತೋರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ₹ 70 ಲಕ್ಷದವರೆಗೆ ಖರ್ಚು ಮಾಡಲು ಅವಕಾಶ ಇದೆ. ನಾಮಪತ್ರ ಸಲ್ಲಿಕೆಯ ವೇಳೆ ಇಡುವ ಭದ್ರತಾ ಠೇವಣಿ ಕೂಡ ಈಖರ್ಚಿನಲ್ಲಿ ಬರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ₹ 12.5 ಸಾವಿರ ಹಾಗೂ ಇತರ ಅಭ್ಯರ್ಥಿಗಳು ₹ 25 ಸಾವಿರಭದ್ರತಾ ಠೇವಣಿ ಇಡಬೇಕಿದೆ.
ಸ್ವಂತ ಹಣ ಖರ್ಚು ಮಾಡದ ಹೆಗಡೆ
ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರಿಗೆ ಪಕ್ಷದಿಂದ ₹ 40 ಲಕ್ಷ ಚುನಾವಣೆಯ ವೇಳೆ ಖರ್ಚಿಗಾಗಿ ಹಣ ಬಂದಿದೆ. ಅದರಲ್ಲೇಎಲ್ಲವನ್ನೂ ಮುಗಿಸಿರುವಅವರು, ಏ.21ರ ವರೆಗೂ ಸ್ವಂತ ಹಣವನ್ನು ಬಳಸಿಲ್ಲ ಎನ್ನುತ್ತದೆಚುನಾವಣಾ ಆಯೋಗದ ಮಾಹಿತಿ.
ಪಕ್ಷದ ಹಣದಲ್ಲೂ ₹ 25 ಸಾವಿರ ನಾಮಪತ್ರದ ಭದ್ರತಾ ಠೇವಣಿ ಸೇರಿ ₹ 37,67,450 ಖರ್ಚು ಮಾಡಿ, ಕ್ಷೇತ್ರದಲ್ಲಿ ಅತಿ ಹೆಚ್ಚು ಚುನಾವಣಾ ವೆಚ್ಚ ತೋರಿಸಿರುವವರ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿ ಅನಂತಕುಮಾರ ಹೆಗಡೆ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.