ADVERTISEMENT

ಆರೋಪಿ ಬಂಧಿಸುವಂತೆ ಮತ್ತೆ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಂಬಿಗ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:27 IST
Last Updated 17 ಅಕ್ಟೋಬರ್ 2019, 6:27 IST
ಹೊನ್ನಾವರದಲ್ಲಿ ನೇತ್ರಾವತಿ ಅಂಬಿಗ ಅವರ ಆತ್ಮಹತ್ಯೆಗೆ ಕಾರಣರಾದ ಆರೋಪಿಯನ್ನು ಬಂಧಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಶಾಸಕ ಸುನೀಲ ನಾಯ್ಕ ಅವರನ್ನು ಬುಧವಾರ ಆಗ್ರಹಿಸಿದರು
ಹೊನ್ನಾವರದಲ್ಲಿ ನೇತ್ರಾವತಿ ಅಂಬಿಗ ಅವರ ಆತ್ಮಹತ್ಯೆಗೆ ಕಾರಣರಾದ ಆರೋಪಿಯನ್ನು ಬಂಧಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಶಾಸಕ ಸುನೀಲ ನಾಯ್ಕ ಅವರನ್ನು ಬುಧವಾರ ಆಗ್ರಹಿಸಿದರು   

ಹೊನ್ನಾವರ: ಅಂಗನವಾಡಿ ಕಾರ್ಯಕರ್ತೆನೇತ್ರಾವತಿ ಪ್ರಭಾಕರ ಅಂಬಿಗ ಅವರ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿ ಬುಧವಾರ ಮತ್ತೆ ಪ್ರತಿಭಟನೆ ನಡೆಸಿದರು.

ನೇತ್ರಾವತಿಅ.12ರಂದು ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಕಾಸರಕೋಡ ಗ್ರಾಮ ಪಂಚಾಯ್ತಿಸದಸ್ಯೆ ವಿಮಲಾ ನಾಯ್ಕ ಎಂಬುವವರು ಬಡ್ಡಿ ಹಣಕ್ಕೆ ಕೊಟ್ಟಿದ್ದರು. ಅದನ್ನು ವಾಪಸ್ ಕೊಡುವಂತೆ ನೇತ್ರಾವತಿ ಅವರಿಗೆ ಕಿರುಕುಳ ಕೊಟ್ಟಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿ ವಿಮಲಾ ನಾಯ್ಕ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಕಳೆದ ಶನಿವಾರ ಅಂಗನವಾಡಿ ಕಾರ್ಯಕರ್ತೆಯರುಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದ್ದರು. ಮೂರು ದಿನಗಳೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಅಂದು ಎಚ್ಚರಿಕೆಯನ್ನೂ ನೀಡಿದ್ದರು.

ತಹಶೀಲ್ದಾರ್ ವಿವೇಕ ಶೇಣ್ವಿ ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲುಬಂದರು. ಆದರೂಪ್ರತಿಭಟನಾಕಾರರು ಅವರಿಗೆ ಮನವಿ ನೀಡಲಿಲ್ಲ. ಜಿಲ್ಲಾಧಿಕಾರಿ ಅಥವಾ ಶಾಸಕರು ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಬೇಕು ಎಂದು ಅವರು ಪಟ್ಟು ಹಿಡಿದರು.

ADVERTISEMENT

ಶಾಸಕ ಸುನೀಲ ನಾಯ್ಕ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ‘ಒಂದೆರಡು ದಿನಗಳೊಳಗೆ ಜಿಲ್ಲಾಧಿಕಾರಿ ಬಳಿಗೆ ಪ್ರತಿಭಟನಾ ನಿರತರ ನಿಯೋಗ ಕರೆದುಕೊಂಡು ಹೋಗುತ್ತೇನೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತೇನೆ’ ಎಂದು ಶಾಸಕರು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಸಂಘದ ರಾಜ್ಯ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.