ಅಂಕೋಲಾ (ಉತ್ತರ ಕನ್ನಡ): ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಲಾ ನಾಯಕ ಅವರನ್ನು ಕರ್ತವ್ಯಲೋಪದ ಆಧಾರದ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣ ಅಮಾನತು ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನಾಲ್ಕು ವಿವಿಧ ದೂರುಗಳ ಆಧಾರದ ಮೇಲೆ ಅವರನ್ನು ಅಮಾನತು ಮಾಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ಕಾರಕ್ಕೆ ಕೋರಿದ್ದರು.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇ.ಸಿದ್ದಲಿಂಗಯ್ಯ ಹಿರೇಮಠ ಆಗಸ್ಟ್ 3 ರಂದು ತನಿಖೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. 15 ವಿವಿಧ ದೂರುಗಳ ಅನ್ವಯ, ನಾಗರಿಕ ಸೇವಾ ನಡತೆ 2021ರ ನಿಯಮ 3ರ ಉಪನಿಯಮ 1(1),(2),(3)ರ ಅಡಿಯಲ್ಲಿ ಕರ್ತವ್ಯ ದುರುಪಯೋಗವಾಗಿದ್ದು, ಅಮಾನತು ಮಾಡಲು ಶಿಫಾರಸು ಮಾಡಿದ್ದರು.
ಇಲಾಖಾ ವಿಚಾರಣೆ ಅಥವಾ ಶಿಸ್ತುಕ್ರಮ ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮ 1957 ರ 10(1), 10(3) ಅಡಿಯಲ್ಲಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಮ್. ಧನಂಜಯ ಆದೇಶ ಹೊರಡಿಸಿದ್ದಾರೆ.
ಶಾಮಲಾ ನಾಯಕ ಅವರ ಅವರ ಅಮಾನತು ಬಗ್ಗೆ ಅಧಿಕೃತ ಆದೇಶದ ಪ್ರತಿ ಕೈಸೇರಿಲ್ಲ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ತಿಳಿಸಿದ್ದಾರೆ. ಆದೇಶದ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.