ADVERTISEMENT

ವೈಜ್ಞಾನಿಕ ಅಂಶ ಅಲ್ಲಗಳೆದರೆ ಪ್ರತಿಭಟನೆ: ಸರ್ಕಾರಕ್ಕೆ ಸ್ವರ್ಣವಲ್ಲಿ ಸ್ವಾಮೀಜಿ

ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 19:30 IST
Last Updated 24 ಮಾರ್ಚ್ 2021, 19:30 IST
ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಶಿರಸಿಯಲ್ಲಿ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು.
ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಶಿರಸಿಯಲ್ಲಿ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು.   

ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಿಂದ ಎದುರಾಗಬಹುದಾದ ಅನಾಹುತಗಳ ಕುರಿತು ಸರ್ಕಾರಕ್ಕೆ ಸಲ್ಲಿಸುವ ವೈಜ್ಞಾನಿಕ ಅಂಶಗಳನ್ನು ಅಲ್ಲಗಳೆದರೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಎಚ್ಚರಿಸಿದರು.

ಬೇಡ್ತಿ ಹಾಗೂ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸಮಾಲೋಚನಾ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ‘ವೈಜ್ಞಾನಿಕ ಚಿಂತನೆಯೊಂದಿಗೆ ಸರ್ಕಾರ ಸಾಗಲಿ. ಅದು ಸಾಧ್ಯವಾಗದಿದ್ದರೆ ಹೋರಾಟ ಅನಿವಾರ್ಯ’ ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಹೆಚ್ಚಲಿದೆ. ಸರ್ಕಾರ ಈ ಯೋಜನೆಯನ್ನು ಮರು ಪರಿಶೀಲಿಸಬೇಕು’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ವಿಜ್ಞಾನ ಲೇಖಕ ನಾಗೇಶ ಹೆಗಡೆ, ‘ಪಶ್ಚಿಮ ಘಟ್ಟ ದೇಶಕ್ಕೆ ಗಂಗಾಧರ ಇದ್ದಂತೆ. ಇಲ್ಲಿ ನೀರು ಶೇಖರಣೆಯಾದರೆ ತೆಲಂಗಾಣ, ಉತ್ತರ ಭಾರತದಲ್ಲಿ ಶುದ್ಧಗಾಳಿ ಸಿಗುತ್ತದೆ. ನದಿ ಜೋಡಣೆಯಾದರೆ ಪಶ್ಚಿಮ ಘಟ್ಟಕ್ಕೆ ಗಂಡಾಂತರ ಎದುರಾಗಬಹುದು’ ಎಂದರು.

ಬಿ.ಎಂ.ಕುಮಾರಸ್ವಾಮಿ, ‘ಮಳೆ ಬೀಳುವ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸವಾಗಬೇಕು. ಕೆರೆಗಳ ಪುನಶ್ಚೇತನ ಮಾಡಬೇಕು. ಪ್ರಧಾನ ಮಂತ್ರಿ ಮೋದಿಯವರ 'ಕ್ಯಾಚ್ ದಿ ರೇನ್' ತತ್ವ ಪಾಲಿಸಿದರೆ ಸಾಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.