ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು ಗುಡ್ಡದ ಅಂಚಿನಲ್ಲಿ ಇರುವ 8 ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಗುರುವಾರ ಮುಟ್ಟಳ್ಳಿ ಪಂಚಾಯಿತಿಯಿಂದ ಮನೆಯವರಿಗೆ ನೋಟಿಸ್ ನೀಡಲಾಗಿದೆ.
ಮುಟ್ಟಳ್ಳಿಯಲ್ಲಿ 2022ರಲ್ಲಿ ಸುರಿದ ಭಾರಿ ಮಳೆಗೆ ಗುಡ್ಡದ ಅಂಚಿನಲ್ಲಿ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರು. ಜೂನ್ 16 ರಂದು ಬೆಂಗಳೂರು ಮತ್ತು ಕಾರವಾರದಿಂದ ಪರಿಣಿತ ಭೂಮಿತಿ ಶಾಸ್ತ್ರಜ್ಞರು ಮುಟ್ಟಳ್ಳಿಗೆ ಬಂದು ಗುಡ್ಡ ಕುಸಿತದ ಸಂಭಾವನೀಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಅವರು ನೀಡಿದ ಜಿಎಸ್ಐ ವರದಿಯಂತೆ ಪ್ರಸ್ತುತ ಪ್ರದೇಶದಲ್ಲಿ ಭೂಕುಸಿತವಾಗುವ ಸಂಭವ ಇದೆ ಎಂದು ಸಲಹೆ ನೀಡಿದ್ದರು. ಜೊತೆಗೆ ಅಲ್ಲಿನ ಪ್ರದೇಶವೂ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದರು.
ಸುರಕ್ಷತೆ ಹಾಗೂ ಕಾಳಜಿ ದೃಷ್ಟಿಯಿಂದ ಮಳೆಗಾಲ ಮುಗಿಯುವ ತನಕ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ನೀಡಿದ್ದಾರೆ. ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಾಜೇಶ್ವರಿ ಚಂದಾವರ, ನೋಡಲ್ ಅಧಿಕಾರಿ ಶ್ರವಣ ಕುಮಾರ, ಪಂಚಾಯಿತಿ ಅಧ್ಯಕ್ಷೆ ರಜನಿ ನಾಯ್ಕ ಮತ್ತು ಅವರ ತಂಡ ಇದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಸದಸ್ಯೆ ಲಕ್ಷ್ಮೀನಾಯ್ಕ, ಸ್ಥಳೀಯರು ಇದ್ದರು.
Cut-off box - ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಕಳೆದ ಎರಡು ವರ್ಷಗಳಿಂದ ಭಾರಿ ಮಳೆಯಾಗುವ ಸಂದರ್ಭದಲ್ಲಿ ನೀವು ಬಂದು ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ನೋಟಿಸ್ ನೀಡುತ್ತೀರಿ. ಸುರಕ್ಷಿತ ಸ್ಥಳ ಯಾವುದು? ನಾವು ಎಲ್ಲಿ ಹೋಗಬೇಕು? ಏನು ಮಡಬೇಕು ಎಂದು ಹೇಳುವುದಿಲ್ಲ. ಏಕಾಏಕಿ ನಾವು ಇಲ್ಲಿಂದ ಎಲ್ಲಿಗೆ ತೆರಳಬೇಕು? ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಮನೆಯನ್ನು ಎನು ಮಾಡಬೇಕು? ಪರ್ಯಾಯವಾಗಿ ವ್ಯವಸ್ಥೆ ಕಲಿಸದೆ ಅಪಾಯ ಇದೆ ಇಲ್ಲಿಂದ ತೆರಳಿ ಎಂದರೆ ಹೇಗೆ ಮಾಡಬೇಕು ಎಂದು ನೋಟಿಸ್ ನೀಡಲು ಬಂದ ಅಧಿಕಾರಿಗಳ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ಮೊದಲೆ ಈ ಕುರಿತು ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.