ಅಂಕೋಲಾ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್. ವಿ. ಸಂಕನೂರ ತಾಲ್ಲೂಕಿನಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ತಾಲ್ಲೂಕಿನ ಪ್ರಮುಖ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಜೈಹಿಂದ್ ಪ್ರೌಢಶಾಲೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಆಶೀರ್ವಾದದಿಂದ ಹಿಂದಿನ ಚುನಾವಣೆಯಲ್ಲಿ ಗೆಲುವು ದೊರಕಿತು. ಮೊದಲ ಚುನಾವಣೆಯಲ್ಲಿ ಪಕ್ಷದ ನಾಯಕರು ಮತ್ತು ಪಕ್ಷದ ಸಿದ್ಧಾಂತದ ಆಧಾರದಲ್ಲಿ ಮತಯಾಚನೆ ಮಾಡಿದ್ದೆ. ಈ ಚುನಾವಣೆಯಲ್ಲಿ ಅವುಗಳ ಜೊತೆಗೆ ವಿಧಾನಪರಿಷತ್ ಸದಸ್ಯರಾಗಿ ಮಾಡಿದ ಸಾಧನೆಗಳೊಂದಿಗೆ ಮತಯಾಚನೆ ಮಾಡುತ್ತಿದ್ದೇನೆ. ಪದವೀಧರ ಮತ್ತು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಈಗಾಗಲೇ ಈ ಹಿಂದೆ ಮಾಡಿದ ಕಾರ್ಯಗಳನ್ನು ‘ಸ್ಪಂದನೆ ಮತ್ತು ಸಾಧನೆ’ ಎಂಬ ಸಾಧನ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದೇನೆ ಎಂದರು.
ಈಗಿನ ಚುನಾವಣೆಯಲ್ಲಿ ಆಯ್ಕೆಯಾದರೆ 2006 ನಂತರ ನೇಮಕಗೊಂಡ ಅನುದಾನಿತ ನೌಕರರಿಗೂ ಸಹಿತ ಪಿಂಚಣಿ ಯೋಜನೆ ಜಾರಿಗೆ ತರುವುದು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಎನ್ ಪಿ ಎಸ್ ಪಿಂಚಣಿ ಯೋಜನೆ ಬದಲಾಗಿ ಓ ಪಿಎಸ್ ಯೋಜನೆಯನ್ನು ಪುನಃ ಜಾರಿಗೆ ತರಲು ಪ್ರಯತ್ನಿಸುವುದು ಸೇರಿದಂತೆ ಹಲವು ಯೋಜನೆಗಳಿದ್ದು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಸದಾ ಕ್ರಿಯಾಶೀಲ ಮನೋಭಾವ ಹಾಗೂ ಅಪಾರ ಅನುಭವವುಳ್ಳ ಸಂಕನೂರ ಅವರನ್ನು ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಗಣಪತಿ ಉಳ್ವೇಕರ ನಾಗರಾಜ ನಾಯಕ ಭಾಸ್ಕರ ನಾರ್ವೇಕರ, ವೀರೇಶ, ಪದ್ಮನಾಭ ಪ್ರಭು ಬಿಂದೇಶ್ ನಾಯಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.