ಶಿರಸಿ: ಹಳ್ಳಿಗಳಲ್ಲಿ ಗೊಬ್ಬರವಾಗಬೇಕಿದ್ದ ಕಸವನ್ನು ವಿಲೇವಾರಿ ಮಾಡುವ ನೆಪದಲ್ಲಿ ವಾಹನ ಖರೀದಿ, ಕಟ್ಟಡ ನಿರ್ಮಿಸಿ ಅದರಲ್ಲಿ ಪರ್ಸಂಟೇಜ್ ಹೊಡೆಯಲು ಬಿಜೆಪಿ ಸರ್ಕಾರ ಹೊರಟಿದೆ ಎಂದುಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದರು.
ತಾಲ್ಲೂಕಿನ ಬಸಲೆಕೊಪ್ಪದಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳ ಅಭಿವೃದ್ಧಿ ಹಣವನ್ನು ಅಗತ್ಯವಿಲ್ಲದ ಕೆಲಸಕ್ಕೆ ಬಳಸಿ ಪೋಲು ಮಾಡಲಾಗಿದೆ. ಈಗಿನ ಸರ್ಕಾರಕ್ಕೆ ವಸತಿ ಯೋಜನೆಯ ಒಂದು ಮನೆಯನ್ನೂ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅನುದಾನ ನೀಡಲಾಗದ ಬಿಜೆಪಿ ಈ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಮತ ಕೇಳುವ ನೈತಿಕತೆ ಕಳೆದುಕೊಂಡಿದೆ’ ಎಂದು ಟೀಕಿಸಿದರು.
‘ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರದ ಅಗತ್ಯ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಬಡವರ ಪರ ಯೋಜನೆಯನ್ನೂ ಎಂದೂ ಸ್ಥಗಿತಗೊಳಿಸಿರಲಿಲ್ಲ’ ಎಂದರು.
‘ಭೀಮಣ್ಣ ಪಕ್ಷದ ಹೊರತಾಗಿಯೂ ಎಲ್ಲರೂ ಒಪ್ಪುವಂತ ಅಭ್ಯರ್ಥಿ ಆಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಸದಸ್ಯರ ಧ್ವನಿಯಾಗಿ ವಿಧಾನ ಪರಿಷತ್ನಲ್ಲಿ ಸಮರ್ಥವಾಗಿ ಕೆಲಸ ಮಾಡುವ ಗುಣ ಅವರಿಗಿದೆ’ ಎಂದರು.
ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಅಬ್ಬಾಸ್ ತೊನ್ಸೆ, ಶ್ರೀಪಾದ ಹೆಗಡೆ ಕಡವೆ, ಸತೀಶ ನಾಯ್ಕ, ಸಂತೋಷ ಶೆಟ್ಟಿ, ಬಸವರಾಜ ದೊಡ್ಮನಿ, ಮಾಧವ ರೇವಣಕರ, ಪ್ರದೀಪ ಶೆಟ್ಟಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.