ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರೇಂಜರ್ಸ್ಗಳಿಗೆ ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರ, ರೋವರ್ಸ್ ಮತ್ತು ರೇಂಜರ್ಸ್ಗಳಿಗೆ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರವು ಇಲ್ಲಿನ ಗೋಳಿ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿದೆ.
ಮಂಗಳವಾರದಿಂದ ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಶಿಬಿರವನ್ನು ಉದ್ಘಾಟಿಸಿದರು. ‘ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಸೀಮಿತರಾಗದೇ, ಎಲ್ಲ ಕ್ಷೇತ್ರಗಳಲ್ಲಿ ಹೆಜ್ಜೆಗುರುತನ್ನು ಮೂಡಿಸಿದ್ದಾರೆ. ಅವರಿಗೆ ಅಗತ್ಯ ಮಾರ್ಗದರ್ಶನ ಮಾಡಿದರೆ, ಸಾಧನೆ ಮಾಡಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಮಹಿಳೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಕಾರ್ಯ ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಮಾತನಾಡಿ, ‘ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಸದಾ ಜಾಗೃತವಾಗಿರಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಶಿಬಿರಗಳು ಪೂರಕವಾಗಿವೆ’ ಎಂದರು. ಗೈಡ್ಸ್ನ ಜಿಲ್ಲಾ ಘಟಕದ ಉಪಾಧ್ಯಕ್ಷೆ ಸೂರಜ್ರಾಣಿ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಗೈಡ್ಸ್ನ ರಾಜ್ಯ ಘಟಕದ ಆಯುಕ್ತೆ ಜಾನಕಿ ವೇಣುಗೋಪಾಲ, ಆಯುಕ್ತ ಎಂ.ಎಂ.ಭಟ್ಟ, ಬ್ರಹ್ಮಕುಮಾರಿ ವೀಣಾಜಿ, ವಿರೇಶ ಮಾದರ, ಜ್ಞಾನೇಶ, ಶ್ವೇತಾ ಇದ್ದರು. ಜ್ಯೋತಿ ಭಟ್ಟ ಸ್ವಾಗತಿಸಿದರು. ಮಾರುತಿ ಉಪ್ಪಾರ ನಿರೂಪಿಸಿದರು. ವಿ.ಎಚ್.ಭಟ್ಕಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.