ADVERTISEMENT

ಯಾಣ: ಭೈರವೇಶ್ವರ ದೇವಾಲಯದ ಮಂಟಪ ಬಳಿ ಕುಸಿತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 13:33 IST
Last Updated 15 ಜುಲೈ 2023, 13:33 IST
 ಕುಮಟಾ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಯಾಣದ ಭೈರವೇಶ್ವರ ದೇವಾಲಯ ಮಂಟಪದ ಬಳಿ ಮಳೆಗೆ ಮಣ್ಣು ಕುಸಿದಿರುವುದು
 ಕುಮಟಾ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಯಾಣದ ಭೈರವೇಶ್ವರ ದೇವಾಲಯ ಮಂಟಪದ ಬಳಿ ಮಳೆಗೆ ಮಣ್ಣು ಕುಸಿದಿರುವುದು   

ಕುಮಟಾ: ಪ್ರಸಿದ್ಧ ಯಾತ್ರಾ ಹಾಗೂ ಪ್ರವಾಸಿ ತಾಣವಾದ ತಾಲ್ಲೂಕಿನ ಯಾಣದ ಭೈರವೇಶ್ವರ ದೇವಾಲಯದ ಮಹಾದ್ವಾರ ತೀವ್ರ ಮಳೆಯಿಂದಾಗಿ ಕುಸಿಯುವ ಹಂತ ತಲುಪಿದೆ‘ ಎಂದು ಸ್ಥಳೀಯರು ದೂರಿದ್ದಾರೆ.

`ಮಳೆಯ ತೀವ್ರತೆಗೆ ದೇವಾಲಯದ ಮಹಾದ್ವಾರದ ಮುಖ್ಯಮಂಟಪದ ಎದುರು ಮಣ್ಣು ಕುಸಿದಿದೆ. ಇದೇ ರೀತಿ ಮುಂದುವರಿದರೆ ಮಹಾದ್ವಾರ ಕುಸಿದು ಬೀಳುವ ಅಪಾಯ ಕೂಡ ಇದೆ. ಹಿಂದೆ ಇಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಅರಣ್ಯ ಇಲಾಖೆ ಹಾಗೂ ಶಾಸಕರ ನಿಧಿಯ ಅನುದಾನದಿಂದ ಕುಸಿತ ತಡೆಯಲು ಕಾಮಗಾರಿ ನಡೆಸಲಾಗಿತ್ತು. ಆದರೆ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದರಿಂದ ಕುಸಿತದ ತೀವ್ರತೆ ಹೆಚ್ಚಿದೆ.

‘ಸುಮಾರು ₹ 2 ಕೋಟಿ ವೆಚ್ಚದಲ್ಲಿ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಿದರೆ ಮುಂದೆ ಕುಸಿತ ತಡೆಯಬಹುದು. ಜಿಲ್ಲೆಯ ಮಹತ್ವದ ಪ್ರವಾಸಿ ತಾಣವಾದ ಯಾಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹೆಚ್ಚಿನ ಲಕ್ಷ್ಯ ವಹಿಸಬೇಕು' ಎಂದು ಮುಖಂಡ ರಾಜು ಮಾಸ್ತಿಹಳ್ಳ, ಸ್ಥಳೀಯರಾದ ಗಣಪತಿ ಮರಾಠೆ ಹಾಗೂ ಶಂತಾರಾಮ ಮರಾಠೆ ಒತ್ತಾಯಿಸಿದ್ದಾರೆ.

ADVERTISEMENT

ಶಾಸಕ ದಿನಕರ ಶೆಟ್ಟಿ ಈ ಕುರಿತು ಪ್ರತಿಕ್ರಿಯಿಸಿ, `ಭೈರವೇಶ್ವರ ದೇವಾಲಯದವರೆಗೆ ಹೋಗಲು ಸೂಕ್ತ ರಸ್ತೆ ಇಲ್ಲದ್ದರಿಂದ ಯಾವುದೇ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗಬೇಕಾಗಿದೆ. ದೇವಾಲಯದ ಬಳಿ ಹಿಂದೆಯೂ ಕುಸಿತ ಉಂಟಾದಾಗ ₹ 40 ಲಕ್ಷ ಅನುದಾನ ನೀಡಲಾಗಿದೆ. ಈ ಕುರಿತು ಕ್ರಮ ಕೈಕೊಳ್ಳಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.