ADVERTISEMENT

ಕಾರವಾರ ಶಾಸಕಿಗೆ ಸರ್ಕಾರ ಯಾವುದಿದೆ ಎಂಬ ಅರಿವಿಲ್ಲವೆ?: ಭೀಮಣ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 8:33 IST
Last Updated 13 ಆಗಸ್ಟ್ 2022, 8:33 IST
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ   

ಶಿರಸಿ: 'ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ರಾಜ್ಯದಲ್ಲಿ ಯಾವ ಸರ್ಕಾರವಿದೆ ಎಂಬ ಅರಿವಿದೆಯೆ?' ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರಶ್ನಿಸಿದರು.

'ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ಆಜಾದ್ ಅಣ್ಣಿಗೇರಿ ನೇಮಿಸಿದ್ದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ' ಎಂದು ಇಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ನೇಮಕ ಮಾಡುವ ಮುನ್ನ ವ್ಯಕ್ತಿಯ ಪೂರ್ವಾಪರದ ಬಗ್ಗೆ ಸರ್ಕಾರ ಅರಿತಿರಬೇಕು. ಆದರೆ ಪರೇಶ್ ಮೇಸ್ತ ಹತ್ಯೆಯಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ನೇಮಿಸಿರುವುದು ಬಿಜೆಪಿ ಸರ್ಕಾರದ ನಿಷ್ಕ್ರೀಯತೆ ಎತ್ತಿ ತೋರಿಸಿದೆ' ಎಂದರು.

ADVERTISEMENT

'ಶಾಸಕರು ಬೇಜವಬ್ದಾರಿತನ ಹೇಳಿಕೆ ನೀಡುವುದನ್ನು ಬಿಟ್ಟು ಜನರ ಕ್ಷಮೆ ಕೇಳಬೇಕು. ಜನರು ವಹಿಸಿದ ಜವಾಬ್ದಾರಿ ಮೊದಲು ನಿಭಾಯಿಸಲಿ. ಅದನ್ನು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ' ಎಂದರು.

'ಆಜಾದ್ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದುದು ನಿಜ. ಆರೋಪಿತರಾದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಇದ್ದಾರೆ' ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಕ್ಫ್ ಸಲಹಾ ಮಂಡಳಿಗೆ ಪದಾಧಿಕಾರಿಗಳ ಆಯ್ಕೆಗೆ ಕಾಂಗ್ರೆಸ್ ಕೂಡ ಪಟ್ಟಿ ನೀಡಿದೆ ಎಂದು ಹೇಳಿರುವುದು ಸತ್ಯಕ್ಕೆ ದೂರ. ನಮ್ಮಿಂದ ಪಟ್ಟಿ ಅಥವಾ ಶಿಫಾರಸ್ಸು ತವಾನೆಯಾಗಿದ್ದರೆ ಅದನ್ನು ಬಹಿರಂಗವಾಗಿ ಪ್ರದರ್ಶಿಸಲಿ' ಎಂದು ಸವಾಲೆಸೆದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಪ್ರದೀಪ ಶೆಟ್ಟಿ, ಜಗದೀಶ ಗೌಡ, ಶ್ರೀನಿವಾಸ ನಾಯ್ಕ, ರಘು ಕಾನಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.