ADVERTISEMENT

ಹೆಬ್ಬಾರ್ ಪರ ನಿಂತರೆ ಪಕ್ಷದ ಹುದ್ದೆಯಿಂದ ವಜಾ

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನ

ಶಾಂತೇಶ ಬೆನಕನಕೊಪ್ಪ
Published 29 ಜುಲೈ 2019, 14:30 IST
Last Updated 29 ಜುಲೈ 2019, 14:30 IST

ಮುಂಡಗೋಡ:ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಮತ್ತೆ ಕೈ ವಶ ಮಾಡಿಕೊಳ್ಳಬೇಕು. ಅನರ್ಹಗೊಂಡಿರುವ ಶಾಸಕರ ಪರವಾಗಿ ಇರುವ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ತಿದ್ದಿಕೊಳ್ಳದಿದ್ದರೆ ಹುದ್ದೆಯಿಂದ ತೆಗೆದು ಪಕ್ಷ ಸಂಘಟಿಸುವ ಪ್ರಾಮಾಣಿಕರಿಗೆ ಅವಕಾಶ ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಮುಖಂಡರು, ಸದ್ಯದ ಪರಿಸ್ಥಿತಿಯ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿದ ನಂತರ, ಯಲ್ಲಾಪುರ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷರಿಂದ ಸಂಪೂರ್ಣ ಮಾಹಿತಿ ಕೇಳಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆಲವು ದಿನಗಳಿಂದ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಬೇಕೆಂದು ಒಂದು ಬಣ ಮನವಿ ಮಾಡುತ್ತ ಬಂದಿದೆ. ಪಕ್ಷ ಸಂಘಟನೆಗೆ ಮೊದಲು ಬ್ಲಾಕ್‌ ಸಮಿತಿ ಪುನರ್ ರಚಿಸಬೇಕು ಎಂಬ ಹಿರಿಯ ಮುಖಂಡರ ಮಾತಿಗೆ,ಈ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

ADVERTISEMENT

‘ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಭೆ ನಡೆದಿದೆ. ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿದ ನಂತರ, ಪಕ್ಷದ ಪರಿಸ್ಥಿತಿ, ಕಾರ್ಯಕರ್ತರ ಒಲವು ಇತ್ಯಾದಿಗಳ ಕುರಿತು ಚರ್ಚಿಸಲಾಯಿತು. ಬ್ಲಾಕ್‌ ಸಮಿತಿ ಬದಲಾವಣೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಒಂದೆರೆಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ನಿರ್ಧರಿಸಲಾಗಿದೆ. ಯಲ್ಲಾಪುರ ಕ್ಷೇತ್ರದಲ್ಲಿಯೂ ಕೆಲವು ಬದಲಾವಣೆ ಆಗುವ ಸಾಧ್ಯತೆಯಿದೆ. ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ರಾಜ್ಯಸಮಿತಿಯಗಮನಕ್ಕೆ ತರಲಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿಯಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.